ಇತ್ತೀಚೆಗೆ ಆಸ್ಪತ್ರೆ, ಶಸ್ತ್ರಚಿಕಿತ್ಸೆ ಮತ್ತು ಐಸಿಯು ಬಗ್ಗೆ ಬಾಲಿವುಡ್ನ ಬಿಗ್ ಬಿ (Bollywood) ಅಮಿತಾಬ್ ಬಚ್ಚನ್ (Amitabh Bachchan) ಮಾಡಿದ್ದ ಬ್ಲಾಗ್ ಪೋಸ್ಟ್ ಅಭಿಮಾನಿಗಳಲ್ಲಿ ಭಾರೀ ಆತಂಕ ಮೂಡಿಸಿತ್ತು. ಆದರೆ ಇದೀಗ ಸ್ವತಃ ಅಮಿತಾಬ್ ಬಚ್ಚನ್ ಎಲ್ಲ ವದಂತಿಗಳಿಗೆ ತೆರೆ ಎಳೆದು, ʼನಾನು ಚೆನ್ನಾಗಿದ್ದೇನೆ. ನನ್ನ ಪೋಸ್ಟ್ನ್ನು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆʼ ಎಂದು ಸ್ಪಷ್ಟನೆ ನೀಡಿದ್ದಾರೆ.
ಇತ್ತೀಚೆಗೆ ಅಮಿತಾಬ್ ಬಚ್ಚನ್ ತಮ್ಮ ಬ್ಲಾಗ್ನಲ್ಲಿ ಆಸ್ಪತ್ರೆ, ಶಸ್ತ್ರಚಿಕಿತ್ಸೆ, ಐಸಿಯು ಹಾಗೂ ಮನೆಗೆ ಬಂದ ಬಳಿಕದ ಚೇತರಿಕೆ ಬಗ್ಗೆ ಬರೆದಿದ್ದರು. ಇದನ್ನು ಓದಿದ ಅಭಿಮಾನಿಗಳು ಬಿಗ್ ಬಿ ಆರೋಗ್ಯ ಹದಗೆಟ್ಟಿದೆಯೇ ಎಂದು ಆತಂಕ ವ್ಯಕ್ತಪಡಿಸಿದ್ದರು. ಸೋಶಿಯಲ್ ಮೀಡಿಯಾದಲ್ಲೂ ಇದೇ ವಿಚಾರ ಭಾರೀ ಚರ್ಚೆಗೆ ಕಾರಣವಾಗಿತ್ತು.
ಈ ಬಗ್ಗೆ ಇದೀಗ ಅಮಿತಾಬ್ ಸ್ಪಷ್ಟನೆ ನೀಡಿದ್ದಾರೆ. ‘ನಾನು ಯಾವುದೇ ಶಸ್ತ್ರಚಿಕಿತ್ಸೆಗೆ ಒಳಗಾಗಿಲ್ಲ. ನಾನು ಬ್ಲಾಗ್ನಲ್ಲಿ ನನ್ನ ಆರೋಗ್ಯದ ಬಗ್ಗೆ ಬರೆದಿಲ್ಲ. ಶಸ್ತ್ರಚಿಕಿತ್ಸೆಯ ಬಳಿಕ ರೋಗಿಯೊಬ್ಬರು ಎದುರಿಸುವ ಪರಿಸ್ಥಿತಿಯನ್ನು ಉದಾಹರಣೆಯಾಗಿ ಹೇಳಿದ್ದೆ. ಅದನ್ನು ನನ್ನ ಆರೋಗ್ಯಕ್ಕೆ ಸಂಬಂಧಿಸಿದೆ ಎಂದು ಹಲವರು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆʼ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಜೈಲಲ್ಲಿರೋ ದರ್ಶನ್ ಭೇಟಿಯಾದ ರಕ್ಷಿತಾ, ವಿಜಯಲಕ್ಷ್ಮಿ
ಒಬ್ಬ ಚಾಂಪಿಯನ್ ಸೋಲಿನ ಬಳಿಕ ಮತ್ತೆ ಹೇಗೆ ಎದ್ದು ನಿಲ್ಲುತ್ತಾನೆ ಎಂಬುದನ್ನು ವಿವರಿಸಲು ಈ ಉದಾಹರಣೆ ನೀಡಿದ್ದಾಗಿ ಅವರು ಹೇಳಿದ್ದಾರೆ. ದೇಹಕ್ಕೆ ಗಾಯವಾದರೂ, ಸಮಯದೊಂದಿಗೆ ಅದು ಮತ್ತೆ ಚೇತರಿಸಿಕೊಳ್ಳುತ್ತದೆ. ಅದೇ ರೀತಿ ಜೀವನದಲ್ಲೂ ಕಷ್ಟಗಳನ್ನು ಎದುರಿಸಿ ಮುಂದೆ ಸಾಗಬೇಕು ಎಂಬ ಸಂದೇಶ ನೀಡಲು ಈ ಬರಹ ಬರೆದಿದ್ದಾಗಿ ತಿಳಿಸಿದ್ದಾರೆ.
ತಮ್ಮ ಬ್ಲಾಗ್ನ ಕೊನೆಯಲ್ಲಿ ʼಜೀವನದಲ್ಲಿ ಕಲಿಯುವುದಕ್ಕೆ ಅಂತ್ಯವೇ ಇಲ್ಲʼ ಎಂದು ಬರೆದಿರುವ ಅಮಿತಾಬ್, ತಮ್ಮ ಆರೋಗ್ಯ ಚೆನ್ನಾಗಿದ್ದು ಯಾವುದೇ ಆತಂಕ ಬೇಡ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ.ಇದನ್ನೂ ಓದಿ: ಮಲೆನಾಡಲ್ಲಿ ಹೊಸ ಫಾರ್ಮ್ಹೌಸ್ ಖರೀದಿಸಿದ ಸಪ್ತಮಿಗೌಡ
