– ಮಫ್ತಿಯಲ್ಲಿ ಕಾರ್ಯಾಚರಣೆ ನಡೆಸಲಿದ್ದಾರೆ ಪೊಲೀಸರು
ಬೆಂಗಳೂರು: ಸಿಲಿಕಾನ್ ಸಿಟಿಯ ಕ್ರಿಕೆಟ್ ಪ್ರೇಮಿಗಳಿಗೆ ಇಂದು ಹಬ್ಬದ ದಿನ. ಐಪಿಎಲ್ ಹಬ್ಬದ ಭಾಗವಾಗಿ ಇಂದು ಸಂಜೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (M. Chinnaswamy Stadium) ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಗುಜರಾತ್ ಟೈಟಾನ್ಸ್ (GT) ತಂಡಗಳು ಮುಖಾಮುಖಿಯಾಗುತ್ತಿವೆ.
ಈ ಸೀಸನ್ನಲ್ಲಿ ಆರ್ಸಿಬಿ ತವರು ನೆಲದಲ್ಲಿ ಆಡಲಿರುವ ಕೊನೆಯ ಲೀಗ್ ಪಂದ್ಯ ಇದಾಗಿದ್ದು ಕ್ರೀಡಾಂಗಣದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ (Police Security) ಏರ್ಪಡಿಸಲಾಗಿದೆ. ಕಳೆದ ಪಂದ್ಯಗಳ ಅನುಭವದ ಆಧಾರದ ಮೇಲೆ ಪೊಲೀಸರು ಈ ಬಾರಿಯೂ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.
ಸುಮಾರು 2,300 ಪೊಲೀಸ್ ಸಿಬ್ಬಂದಿ ಪಂದ್ಯದ ಭದ್ರತಾ ಕರ್ತವ್ಯದಲ್ಲಿ ಭಾಗಿಯಾಗಲಿದ್ದಾರೆ. ಡಿಸಿಪಿ, ಎಸಿಪಿ ಮತ್ತು ಇನ್ಸ್ಪೆಕ್ಟರ್ ಶ್ರೇಣಿಯ ಅಧಿಕಾರಿಗಳ ನೇತೃತ್ವದಲ್ಲಿ ಜನಜಂಗುಳಿ ನಿಯಂತ್ರಿಸಲು ಭದ್ರತಾ ಪ್ಲಾನ್ ಸಿದ್ಧಪಡಿಸಲಾಗಿದೆ. ಇದನ್ನೂ ಓದಿ: 26 ರನ್ ಹೊಡೆದರೂ ಐಪಿಎಲ್ನಲ್ಲಿ ವಿಶೇಷ ಸಾಧನೆ ಮಾಡಿದ ಟಿಮ್ ಡೇವಿಡ್

ಕ್ರೀಡಾಂಗಣದ ಸುತ್ತಮುತ್ತಲ ರಸ್ತೆಗಳಲ್ಲಿ ಸಂಚಾರ ದಟ್ಟಣೆ ತಡೆಯಲು ಸಂಚಾರ ಪೊಲೀಸರು ವಿಶೇಷ ಗಮನ ಹರಿಸಿದ್ದಾರೆ. ಸ್ಟೇಡಿಯಂ ಹತ್ತಿರದ ಹಲವು ರಸ್ತೆಗಳನ್ನು ‘ನೋ ಪಾರ್ಕಿಂಗ್’ ವಲಯಗಳೆಂದು ಘೋಷಿಸಲಾಗಿದೆ.
ವಾಹನ ಸವಾರರಿಗೆ ಪರ್ಯಾಯ ಮಾರ್ಗಗಳ ಸೂಚನೆ ನೀಡಲಾಗಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದೆ.
ಕಳೆದ ಪಂದ್ಯಗಳ ವೇಳೆ ನೂರಕ್ಕೂ ಹೆಚ್ಚು ಟಿಕೆಟ್ಗಳನ್ನು ಕಾಳಸಂತೆಯಲ್ಲಿ (Black Market) ಮಾರಾಟ ಮಾಡುತ್ತಿದ್ದ ಪ್ರಕರಣಗಳು ಪತ್ತೆಯಾಗಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸಿಸಿಬಿ (CCB) ಪೊಲೀಸರು ಇಂದು ಮಫ್ತಿಯಲ್ಲಿ ಕ್ರೀಡಾಂಗಣದ ಸುತ್ತ ಕಾರ್ಯಾಚರಣೆ ನಡೆಸಲಿದ್ದಾರೆ. ಟಿಕೆಟ್ ಅಕ್ರಮ ಮಾರಾಟಗಾರರ ಮೇಲೆ ಸತತ ನಿಗಾ ಇರಿಸಲಾಗಿದೆ.
ಪಂದ್ಯ ವೀಕ್ಷಣೆಗೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸುವುದರಿಂದ ಜನದಟ್ಟಣೆಯ ಲಾಭ ಪಡೆದು ಮೊಬೈಲ್ ಕಳ್ಳತನ ಮಾಡುವ ತಂಡಗಳ ಬಗ್ಗೆ ಪೊಲೀಸರು ನಿಗಾ ವಹಿಸಿದ್ದಾರೆ. ಸಾರ್ವಜನಿಕರು ತಮ್ಮ ಅಮೂಲ್ಯ ವಸ್ತುಗಳ ಬಗ್ಗೆ ಜಾಗರೂಕರಾಗಿರುವಂತೆ ಸೂಚಿಸಲಾಗಿದೆ.



