ದಾವಣಗೆರೆ: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿದ್ದನ್ನು ನೆನೆದು ಸಿದ್ದರಾಮಯ್ಯ ಸಂಪುಟದಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದ ಎಂ.ಸಿ ಸುಧಾಕರ್ (MC Sudhakar) ಭಾವುಕರಾದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ (Siddarmaiah) ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದನ್ನು ನೆನೆದು ಭಾವುಕರಾದರು. ಸಿದ್ದರಾಮಯ್ಯನವರನ್ನು ಕಳೆದ ಎರಡು, ಮೂರು ದಿನಗಳಿಂದ ನೋಡಲಾಗುತ್ತಿಲ್ಲ. ಎಲ್ಲಾ ವರ್ಗಗಳನ್ನು ಸಮಾನವಾಗಿ ತೆಗೆದುಕೊಂಡು ಹೋಗಿ, ಒಂದು ಜಾತಿಗೆ ಸೀಮಿತವಾಗದೇ ಎಲ್ಲಾ ಸಮುದಾಯಕ್ಕೆ ಸಮಾನತೆ ನೀಡಿದ ವ್ಯಕ್ತಿ ಎಂದರೆ ಅದು ಸಿದ್ದರಾಮಯ್ಯನವರು. ಆದರೆ ಅಂತಹ ವ್ಯಕ್ತಿಯನ್ನು ನೋಡಲಾಗಲಿಲ್ಲ ಎಂದು ಕಣ್ತುಂಬಿಕೊಂಡರು. ಇದನ್ನೂ ಓದಿ:ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಸಂತೋಷ್ ಲಾಡ್ ಕಣ್ಣೀರು
ರಾಜಕಾರಣದಲ್ಲಿ ಮೇಲ್ಫಂಥಿಯನ್ನು ಹಾಕಿಕೊಟ್ಟಿದ್ದರು. ಒಬ್ಬ ರಾಜಕಾರಣಿಯ ವ್ಯಕ್ತಿತ್ವ ಹೇಗೆ ಇರುತ್ತೆ ಎನ್ನುವುದನ್ನು ತಿಳಿಸಿಕೊಟ್ಟಿದ್ದರು. ಅಲ್ಲದೇ ಇದರಿಂದ ಕಾಂಗ್ರೆಸ್ ಪಕ್ಷದ ವರ್ಚಸ್ಸು ಕೂಡ ಸಾಕಷ್ಟು ವೃದ್ಧಿಯಾಗಿದೆ. ಅಧಿಕಾರ ಯಾರಿಗೂ ಶಾಶ್ವತ ಅಲ್ಲ ಎಂದು ಅವರ ಅನುಭವ ನಮಗೆಲ್ಲ ಪಾಠ ಹೇಳಿದೆ. ನಾಳೆ ಸಭೆ ನಡೆಯಲಿದೆ, ಸಮಯ ಹಾಗೂ ಸ್ಥಳ ನಿಗದಿಯಾಗಿಲ್ಲ. ಶಾಸಕಾಂಗದ ಸಭೆಯಾದ ಬಳಿಕ ಅಧಿಕೃತವಾಗಿ ಡಿಕೆಶಿಯವರನ್ನು (DK Shivakumar) ಸಿಎಂ ಆಗುತ್ತಾರೆ. ಡಿಕೆಶಿಯವರು ಸಿಎಂ ಆಗುವುದಕ್ಕೆ ಯಾವುದೇ ಅಡ್ಡಿ ಅತಂಕವಿಲ್ಲ ಎಂದರು.
ಇದೇ ವೇಳೆ ದಲಿತ ಸಿಎಂ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಪಕ್ಷಕ್ಕಾಗಿ ಡಿಕೆಶಿಯವರು ಸಾಕಷ್ಟು ದುಡಿದಿದ್ದಾರೆ. ಅದ್ದರಿಂದ ಹೈಕಮಾಂಡ್ ಈ ಬಾರಿ ಅವರಿಗೆ ಸಿಎಂ ಆಗಲು ಅವಕಾಶ ನೀಡಿದೆ. ಮುಂದೆ ಎಲ್ಲರಿಗೂ ಅವಕಾಶ ಸಿಗಲಿದೆ. ಡಿಕೆಶಿಯವರು ಸಿಎಂ ಆಗಲು ಯಾರ ವಿರೋಧ ಇಲ್ಲ. ಸ್ವತಃ ಸಿದ್ದರಾಮಯ್ಯನವರೇ ಬೆಂಬಲವನ್ನು ಸೂಚಿಸಿದ್ದಾರೆ. 2028ಕ್ಕೆ ಒಟ್ಟಾಗಿ ಶ್ರಮಿಸಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ತರಲು ಮುಂದಾಗುತ್ತೇವೆ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷರಾಗಲು ಸತೀಶ್ ಜಾರಕಿಹೊಳಿಗೆ (Satish Jarkiholi) ಸಾಮರ್ಥ್ಯ ಇದೆ ಎಂಬ ಬಗ್ಗೆ ಮಾತನಾಡಿ, ಅವರೇ ನಾನು ಕೆಪಿಸಿಸಿ ಸಾರಥ್ಯ ವಹಿಸುತ್ತೇನೆ ಎಂದು ಹೇಳಿದ್ದಾರೆ. ಉಪಚುನಾವಣೆಯ ಜವಾಬ್ದಾರಿ ವಹಿಸಿಕೊಂಡು ಗೆಲ್ಲಿಸಿಕೊಂಡು ಬಂದಿದ್ದಾರೆ. ಆಡಂಬರದ ಸಂಘಟನೆ ಅಲ್ಲ, ಅವರದ್ದು ಸೈಲೆಂಟ್ ಆಗಿ ಸಂಘಟನೆ ಮಾಡಿ ಯಶಸ್ಸಿಯಾಗುತ್ತಾರೆ. ಕೆಪಿಸಿಸಿ ಅದ್ಯಕ್ಷರಾಗಲು ಅವರಿಗೆ ಯೋಗ್ಯತೆ ಇದೆ. ಅದರು ಅಧ್ಯಕ್ಷರಾದರೆ ಪಕ್ಷ ಮತ್ತಷ್ಟು ಬಲಿಷ್ಠವಾಗುತ್ತದೆ. ಸಿಎಂ ರಾಜೀನಾಮೆ ನೀಡಿದ್ದಾರೆ, ಹೀಗಾಗಿ ನಾವು ಸದ್ಯ ಮಾಜಿ ಸಚಿವರು, ಇಡೀ ಸಂಪುಟ ಈಗ ಅಸ್ತಿತ್ವದಲ್ಲಿ ಇಲ್ಲ. ಯಾರು ಸಚಿವರು ಆಗುತ್ತಾರೆ ಎನ್ನುವುದು ಹೈಕಮಾಂಡ್ ತೀರ್ಮಾನ ಎಂದರು ತಿಳಿಸಿದರು.
ಸಿದ್ದರಾಮಯ್ಯರನ್ನು ಕಾಂಗ್ರೆಸ್ ಪಕ್ಷ ಅಪಮಾನ ಮಾಡಿದೆ ಎಂಬ ಪ್ರಹ್ಲಾದ್ ಜೋಷಿ (Prahlad Joshi) ಹೇಳಿಕೆ ಬಗ್ಗೆ ಮಾತನಾಡಿ, ಜೋಷಿ ಅವರು ಕೆಲ ತಿಂಗಳ ಹಿಂದೆ ಸಿದ್ದರಾಮಯ್ಯನವರ ಬಗ್ಗೆ ಏನೆಲ್ಲ ಮಾತಾಡಿದ್ರು ಅನ್ನೋದು ಗೊತ್ತಿದೆ. ಈಗ ಅನುಕಂಪ, ಕರುಣೆ ತೋರಿಸೋದು ರಾಜಕೀಯ ಉದ್ದೇಶ ಮಾತ್ರ. ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯರನ್ನು ಕೆಟ್ಟದಾಗಿ ನಡೆಸಿಕೊಂಡಿಲ್ಲ. ರಾಹುಲ್ ಗಾಂಧಿಯವರು ಏನ್ ಹೇಳ್ತಾರೋ ಅದಕ್ಕೆ ನಾವು ಸಿದ್ಧ ಎಂದು ಸಿದ್ದರಾಮಯ್ಯನವರೇ ಹೇಳಿದ್ದಾರೆ. ಸಿಎಂ ಬದಲಾವಣೆ ವಿಚಾರ ಕಳೆದ ಆರೇಳು ತಿಂಗಳಿಂದ ನಡೆಯುತ್ತಿರುವ ಪ್ರಕ್ರಿಯೆ. ಯಡಿಯೂರಪ್ಪನವರನ್ನು ಬದಲಾವಣೆ ಮಾಡುವ ಸಂದರ್ಭದಲ್ಲಿ ಯಾವ ರೀತಿ ಒತ್ತಡ ಹಾಕಿದ್ದಾರೆ ಎನ್ನುವುದು ಗೊತ್ತಿದೆ. ಯಡಿಯೂರಪ್ಪನವರು ಕಣ್ಣೀರು ಹಾಕಿಕೊಂಡು ಹೋಗಿ ರಾಜ್ಯಪಾಲರಿಗೆ ರಾಜೀನಾಮೆ ನೀಡಿದ್ದರು. ಆ ರೀತಿ ಸಿದ್ದರಾಮಯ್ಯರನ್ನು ಕಾಂಗ್ರೆಸ್ ಪಕ್ಷ ನಡೆಸಿಕೊಂಡಿಲ್ಲ. ಬಿಜೆಪಿಯವರ ಕನಸು ನುಚ್ಚು ನೂರಾಗಿದ್ದಕ್ಕೆ ಹತಾಷರಾಗಿ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.ಇದನ್ನೂ ಓದಿ: ಅಂದು KCR, ನಾಯ್ಡು ಇಂದು ಡಿಕೆಶಿ – ಕೊನೆಗೂ ಫಲಿಸಿತು ಡಿಕೆ ಆಪ್ತನ ರಾಜಶ್ಯಾಮಲ ಯಾಗ!
