– ಪೊಲೀಸರ ವಿರುದ್ಧವೇ ಕಿಡ್ನ್ಯಾಪ್ ಕೇಸ್, ವಾಹನಗಳು ವಶಕ್ಕೆ
– 24 ಗಂಟೆಗಳ ಬಳಿಕ ಶಿಮ್ಲಾ-ದೆಹಲ್ಲಿ ಖಾಕಿ ನಡುವಿನ ಘರ್ಷಣೆ ಶಮನ
ನವದೆಹಲಿ/ಶಿಮ್ಲಾ: ಇತ್ತೀಚೆಗೆ ದೆಹಲಿಯಲ್ಲಿ ನಡೆದಿದ್ದ ಎಐ ಇಂಪ್ಯಾಕ್ಟ್ ಶೃಂಗ ಸಭೆಯಲ್ಲಿ (AI Impact Summit) ಅರೆಬೆತ್ತಲೆ ಪ್ರತಿಭಟನೆ ನಡೆಸಿದ್ದ ಮೂವರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನ ಬಂಧಿಸಿ, ಕರೆತರುವಾಗ ಭಾರೀ ನಾಟಕೀಯ ಬೆಳವಣಿಗೆ ನಡೆದಿದೆ. ಆರೋಪಿಗಳನ್ನ ಬಂಧಿಸಲು ಹಿಮಾಚಲ ಪ್ರದೇಶದ ಶಿಮ್ಲಾ ತೆರಳಿದ್ದ ದೆಹಲಿ ಪೊಲೀಸರನ್ನೇ (Delhi Police) ಶಿಮ್ಲಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ಎರಡೂ ಖಾಕಿ ಪಡೆಗಳ ನಡುವೆ ಘರ್ಷಣೆ ಏರ್ಪಟ್ಟಿದ್ದು, ಚರ್ಚೆಗೂ ಗ್ರಾಸವಾಗಿದೆ.
ಹೆಚ್ಚುವರಿ ಮ್ಯಾಜಿಸ್ಟ್ರೇಟ್ (ACJM) ಏಕಾಂಶ್ ಕಪಿಲ್ ಅವರು ನೀಡಿದ ಟ್ರಾನ್ಸಿಟ್ ರಿಮಾಂಡ್ ಅಡಿಯಲ್ಲಿ ದೆಹಲಿ ಪೊಲೀಸ್ ತಂಡ ಮೂವರು ಆರೋಪಿಗಳನ್ನ ಕರೆದೊಯ್ಯುತ್ತಿತ್ತು. ಈ ವೇಳೆ ದೆಹಲಿ ಪೊಲೀಸರನ್ನು ತಡೆದ ಶಿಮ್ಲಾ ಖಾಕಿ (Simla Police), ಆರೋಪಿಗಳಾದ ಸೌರವ್, ಅರ್ಬಾಜ್ ಮತ್ತು ಸಿದ್ಧಾರ್ಥ್ ಮೂವರನ್ನ ಬಲವಂತವಾಗಿ ಕರೆದೊಯ್ಯುತ್ತಿದ್ದಾರೆ. ಅಲ್ಲದೇ ಆರೋಪಿಗಳು ತಂಗಿದ್ದ ರೆಸಾರ್ಟ್ನಲ್ಲಿರುವ ಸಿಸಿಟಿವಿ ಡಿವಿಆರ್ಗಳನ್ನ (CCTV DVR) ಯಾವುದೇ ಅನುಮತಿಯಿಲ್ಲದೇ ತೆಗದುಕೊಂಡಿದ್ದಾರೆ ಎಂದು ಆರೋಪಿಸಿದ್ರು.

ಜೊತೆಗೆ ಅಪಹರಣ ಪ್ರಕರಣ ದಾಖಲಿಸಿ, ವಾಹನಗಳನ್ನೂ ವಶಕ್ಕೆ ಪಡೆದಿದ್ದರು. ಈ ವೇಳೆ ಶಿಮ್ಲಾ-ದೆಹಲಿ ಪೊಲೀಸರ ನಡುವೆ ಘರ್ಷಣೆ ಏರ್ಪಟ್ಟಿತು. ಕೊನೆಗೆ ಮೂವರು ಆರೋಪಿಗಳನ್ನ ಕರೆದುಕೊಂಡು ಹೋಗಲು ಅನುವು ಮಾಡಿಕೊಟ್ಟ ಬಳಿಕ 24 ಗಂಟೆಗಳ ನಂತರ ಘರ್ಷಣೆ ಶಮನವಾಯಿತು.
ನಂತರ ಬಂಧಿತ ಮೂವರು ಯೂತ್ ಕಾಂಗ್ರೆಸ್ ಕಾರ್ಯಕರ್ತರನ್ನು ಶಿಮ್ಲಾ ಜಿಲ್ಲಾ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಈ ಸಂದರ್ಭದಲ್ಲಿ ದೆಹಲಿ ಪೊಲೀಸರು ಉಪಸ್ಥಿತರಿದ್ದರು. ಇದನ್ನೂ ಓದಿ: ಇನ್ಸ್ಟಾಗ್ರಾಮ್ನಲ್ಲಿ 10,00,00,000 ಫಾಲೋವರ್ಸ್ ದಾಟಿದ ಮೊದಲ ವಿಶ್ವನಾಯಕ ಮೋದಿ
ಏನಿದು ಹೈಡ್ರಾಮಾ?
ದೆಹಲಿಯಲ್ಲಿ ನಡೆದ ಇತ್ತೀಚೆಗೆ ನಡೆದ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಅರೆಬೆತ್ತಲೆ ಪ್ರತಭಟನೆ ನಡೆಸಿದ್ದರು. ಈ ಬೆನ್ನಲ್ಲೇ ಪೊಲೀಸರು ಯುವ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಇತರ ನಾಯಕರನ್ನ ಬಂಧಿಸಿದ್ದರು. ಇನ್ನುಳಿದ ಮೂವರು ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆಯ ರೋಹ್ರು ಪ್ರದೇಶದಲ್ಲಿ ಆಶ್ರಯ ಪಡೆಕೊಂಡಿದ್ದರು. ಈ ಬಗ್ಗೆ ಮಾಹಿತಿ ಪಡೆದು ದೆಹಲಿ ಪೊಲೀಸರು ಆರೋಪಿಗಳನ್ನ ಪತ್ತೆ ಮಾಡಿ ಬಂಧಿಸಿದ್ದರು. ಬಳಿಕ ಬುಧವಾರ ತಡರಾತ್ರಿ ಶಿಮ್ಲಾದ ದೀನ್ಡಿಯಾಲ್ ಉಪಾಧ್ಯಾಯ ವಲಯ ಆಸ್ಪತ್ರೆಯಲ್ಲಿ ಮೂವರು ಆರೋಪಿಗಳಿಗೆ ವೈದ್ಯಕೀಯ ಪರೀಕ್ಷೆ ಮಾಡಿಸಿ ಕರೆ ತರುತ್ತಿದ್ದರು. ಇದು ಭಾರೀ ರಾಜಕೀಯ ವಾಗ್ವಾದಕ್ಕೂ ಕಾರಣವಾಗಿದೆ.

ಈ ಬಗ್ಗೆ ಮಾಹಿತಿ ಪಡೆದ ಶಿಮ್ಲಾದ ಪೊಲೀಸರು, ಕೂಡಲೇ ಕ್ರಮ ಕೈಗೊಂಡಿದ್ದಾರೆ. ಧರ್ಮಪುರ ಬಳಿಯ ಚಂಡೀಗಡ- ಕಲ್ಕಾ- ಶಿಮ್ಲಾ ಹೆದ್ದಾರಿಯಲ್ಲಿ ಬ್ಯಾರಿಕೇಡ್ ನಿರ್ಮಿಸಿ ದೆಹಲಿ ಪೊಲೀಸರನ್ನ ತಡೆದಿದ್ದಾರೆ. ಅಲ್ಲದೆ 20 ರಷ್ಟಿದ್ದ ದೆಹಲಿ ಪೊಲೀಸರನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ದೆಹಲಿ ಪೊಲೀಸರ ವಿರುದ್ಧ ಅಪಹರಣ ಪ್ರಕರಣ ದಾಖಲಿಸಿ, ಅವರ ವಾಹನಗಳನ್ನೂ ವಶಕ್ಕೆ ಪಡೆದುಕೊಂಡರು. ಇದನ್ನೂ ಓದಿ: ದೆಹಲಿಗೆ ಇಂದ್ರಪ್ರಸ್ಥ ಹೆಸರನ್ನು ಮರುನಾಮಕರಣ ಮಾಡಿ – ಶಾಗೆ ಬಿಜೆಪಿ ಸಂಸದನಿಂದ ಪತ್ರ
ನಂತರ ಶಿಮ್ಲಾ ಪೊಲೀಸರು, ಮೂವರು ಸಿಬ್ಬಂದಿ ಮಾತ್ರ ಆರೋಪಿಗಳನ್ನ ಕರೆದುಕೊಂಡು ರಾಜಧಾನಿಗೆ ಹಿಂತಿರುಗಬಹುದು. ಉಳಿದವರು ತಮ್ಮ ವಿರುದ್ಧ ದಾಖಲಾಗಿರುವ ಅಪಹರಣ ಪ್ರಕರಣದ ತನಿಖೆಗೆ ಸಹಾಯ ಮಾಡಲು ಶಿಮ್ಲಾದಲ್ಲಿಯೇ ಇರಬೇಕಾಗುತ್ತದೆ ಎಂದು ಹೇಳಿದ್ರು. ಜೊತೆಗೆ ವಶಕ್ಕೆ ಪಡೆದಿರುವ ಡಿವಿಆರ್ಗಳನ್ನು ಹಿಂದಿರುಗಿಸುವಂತೆ ಕೇಳಿದ್ರು. ಇದ್ಯಾವುದಕ್ಕೂ ಒಪ್ಪದ ದೆಹಲಿ ಪೊಲೀಸರು, ತಮ್ಮ ಯಾವುದೇ ಸಿಬ್ಬಂದಿಯನ್ನ ಹಿಂದೆ ಬಿಡುವುದಿಲ್ಲ ಎಂದು ಪಟ್ಟು ಹಿಡಿದ್ರು. ಬಳಿಕ ಶೋಘಿ ಗಡಿಯಲ್ಲಿ ದೆಹಲಿ ಪೊಲೀಸರನ್ನೇ ವಶಕ್ಕೆ ಪಡೆಯಲಾಯಿತು. ಈ ಘರ್ಷಣೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಜೊತೆಗೆ ರಾಜಕೀಯ ಜಟಾಪಟಿಗೂ ಕಾರಣವಾಗಿದೆ. ಇದನ್ನೂ ಓದಿ: ನ್ಯಾಯಾಂಗಕ್ಕೆ ಕಳಂಕ ತರಲು ಬಿಡಲ್ಲ – NCERT ನ್ಯಾಯಾಂಗ ಭ್ರಷ್ಟಾಚಾರ ಅಧ್ಯಾಯದ ಬಗ್ಗೆ ಸುಪ್ರೀಂ ಗರಂ

