ಹಾಸನ: ಈ ರಾಜ್ಯದ ಮುಖ್ಯಮಂತ್ರಿಗಳು ಅಹಿಂದ ಮುಂದಿಟ್ಟು ರಾಜ್ಯದ ಜನತೆಗೆ ದ್ರೋಹ ಮಾಡುತ್ತಿದ್ದಾರೆ. ಈ ಸರ್ಕಾರ ಕೆಲವು ಬ್ರೋಕರ್ಗಳನ್ನು ಇಟ್ಟುಕೊಂಡಿದೆ. ಇದು ಬ್ರೋಕರ್ಗಳ ಸರ್ಕಾರ . ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D Kumaraswamy) ವಾಗ್ದಾಳಿ ನಡೆಸಿದ್ದಾರೆ.
ಹಾಸನದ ಬೂವನಹಳ್ಳಿ ಬಳಿ ನಡೆದ ಜೆಡಿಎಸ್ ಬೃಹತ್ ಸಮಾವೇಶದಲ್ಲಿ ಅವರು ಮಾತನಾಡಿದರು. ಈ ವೇಳೆ, ಈ ರಾಜ್ಯದ ಮುಖ್ಯಮಂತ್ರಿಗಳು ಅಹಿಂದ ಮುಂದಿಟ್ಟುಕೊಂಡು ರಾಜ್ಯದ ಜನತೆಗೆ ದ್ರೋಹ ಮಾಡುತ್ತಿದ್ದಾರೆ. ರಾಜ್ಯ ಸಂಪದ್ಭರಿತವಾಗಿದೆ ಆದರೆ ಬ್ರೋಕರ್ಗಳು, ಲೂಟಿಕೋರರ ಕೈ ಸೇರಿದೆ. ಈ ಸರ್ಕಾರ ರೈತರ ಜೀವನದ ಜೊತೆ ಚೆಲ್ಲಾಟ ಆಡುತ್ತಿದೆ. ಮುಖ್ಯಮಂತ್ರಿ ಕುರ್ಚಿಗಾಗಿ ಕಳೆದ ಎರಡುವರೆ ವರ್ಷದಿಂದ ನಡೆಯುತ್ತಿರುವ ನಾಟಕ ನೋಡುತ್ತಿದ್ದೀರಿ.
ನಾನು ಮತ್ತೊಮ್ಮೆ ಮುಖ್ಯಮಂತ್ರಿ ಆಗುವುದಕ್ಕಿಂತ ಹೆಚ್ಚಾಗಿ ನನ್ನ ಮುಂದೆ ಬೇರೆ ಸವಾಲುಗಳಿವೆ. ಸಂಪೂರ್ಣ ಬಹುಮತದ ಸರ್ಕಾರ ಇಲ್ಲದಿದ್ದರೂ ಎರಡು ಬಾರಿ ಮುಖ್ಯಮಂತ್ರಿ ಆದೆ. ನಾಡು ಯಾವ ದಿಕ್ಕಿನಲ್ಲಿ ಹೋಗುತ್ತಿದೆ ಅದನ್ನು ಸರಿಪಡಿಸಬೇಕು. ಈ ಸರ್ಕಾರದಲ್ಲಿ ಹಣದ ಕೊರತೆ ಇಲ್ಲ. ಆದರೆ ಯಾವುದೇ ಅಭಿವೃದ್ಧಿ ಕಾಣುತ್ತಿಲ್ಲ. ಹಾಸನದಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಹಲವಾರು ಸಚಿವರು ಎರಡು ಕಾರ್ಯಕ್ರಮ ಮಾಡಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ನಮ್ಮ ತಪ್ಪುಗಳಿಂದ ಹಾಸನ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆದ್ದಿದೆ. ಪಾಪ ಅವರು ನಮ್ಮನ್ನು ಏನು ಕೊಡುಗೆ ಎಂದು ಪ್ರಶ್ನೆ ಮಾಡುತ್ತಾರೆ. ಅವರ ಬಗ್ಗೆ ನಾನು ಕೆಟ್ಟ ಪದ ಬಳಸಲ್ಲ ಎಂದು ಹಾಸನ ಸಂಸದ ಶ್ರೇಯಸ್ಪಟೇಲ್ಗೆ ತಿರುಗೇಟು ನೀಡಿದರು.
ತುಮಕೂರಿನಲ್ಲಿ ನಮ್ಮ ಬಗ್ಗೆ ಅಪಪ್ರಚಾರ ಮಾಡಿದ್ರು. ನಾವು ದೇವರನ್ನು ನಂಬಿ ಬದುಕಿದ್ದೇವೆ, ರಾಜಕಾರಣ ಮಾಡುತ್ತಿದ್ದೇವೆ. ದೇವೇಗೌಡರು ಯಾವುದೇ ಕೆಲಸ ಮಾಡಬೇಕಾದರೂ ದೇವರಿಗೆ ಪೂಜೆ ಮಾಡಿ ಶುರು ಮಾಡಿ ಅಂದಿದ್ದಾರೆ. ನಾವು ಅದೇ ದಾರಿಯಲ್ಲಿ ನಡೆಯುತ್ತಿದ್ದೇವೆ. ಎರಡು ಸಾವಿರಕ್ಕೂ ಹೆಚ್ಚು ರೈತರು ಸಾವನ್ನಪ್ಪಿದ್ದಾರೆ. ಸರ್ಕಾರಕ್ಕೆ ಅದರ ಬಗ್ಗೆ ಚಿಂತೆ ಇಲ್ಲ. ಜ.23ರಂದು ತುಮಕೂರಿಗೆ ಹೋಗಿದ್ದೆ 2028ಕ್ಕೆ ಮುಖ್ಯಮಂತ್ರಿ ಅಂಥ ಕೂಗಿದ್ರು, ಜೆಡಿಎಸ್ ಶಕ್ತಿ ಎಲ್ಲಿದೆ ಎಂದು ಹೇಳುವವರಿಗೆ ಇಲ್ಲಿದೆ ನೋಡಿ ಎನ್ನುವ ಸಂದೇಶ ನೀವು ನೀಡಿದ್ದೀರಿ. ದೇವೇಗೌಡರ ಸಲಹೆಯಂತೆ ಈ ಕಾರ್ಯಕ್ರಮ ಆಗಿದೆ. ಮುಂದಿನ 1ನೇ ತಾರೀಖಿಗೆ ಕೇಂದ್ರ ಬಜೆಟ್ ಮಂಡನೆ ಆಗ್ತಾ ಇದೆ. ಆಗ ಕೊನೆ ಹಂತದಲ್ಲಿ ಕೊನೆಯ ಅಧಿವೇಶನದಲ್ಲಿ ಮಾತನಾಡಬೇಕು ಎಂದು ಸಭಾಪತಿಗಳಿಗೆ ಮನವಿ ಮಾಡಿದ್ದಾರೆ.
ರೈತರ ಬೆಳೆ ಖರೀದಿಗೆ ಈ ಸರ್ಕಾರ ಮುಂದಾಗಿಲ್ಲ. ಯಾವುದು ನಿಜವಾದ ಅಹಿಂದ ಸರ್ಕಾರ, ರೈತರು ಅಹಿಂದ ವರ್ಗದವರು ಇಲ್ಲವಾ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು. ರೈತರು ತಮ್ಮ ಬೆಳೆಯನ್ನ ಕಡಿಮೆ ಬೆಲೆಗೆ ಮಾರಾಟ ಮಾಡಿದ ಮೇಲೆ ನೀವು ಖರೀದಿ ಕೇಂದ್ರ ಮಾಡ್ತಿರಿ. ದೇವೇಗೌಡರು ಕಾವೇರಿ ವಿಚಾರದಲ್ಲಿ ಖಾಸಗಿ ಬಿಲ್ ಮಂಡಿಸಿದವರು. ಅಂದು ಆಗಿನ ಸಿಎಂ ಮಾಡಿದ ತಪ್ಪಿನಿಂದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಚನೆ ಆಯ್ತು. ಅದರಿಂದ ಕಾವೇರಿ ಕೊಳ್ಳದ ಜನರಿಗೆ ಅನ್ಯಾಯ ಆಯ್ತು. ಯಾರು ಗೆದ್ದಿದ್ದರು ಅವರನ್ನು ನೀರಾವರಿ ಮಂತ್ರಿ ಮಾಡಿದ್ದರು. ದೇವೇಗೌಡರು ಅವರ ಜೀವನ ಪೂರ್ತಿ ನೀರಾವರಿ ಯೋಜನೆಗಳಿಗೆ ಹೋರಾಡಿದ್ದಾರೆ ಎಂದರು.
ಇತ್ತೀಚೆಗೆ ಹಲವು ಕಡೆ ಮುಂದಿನ ಸಿಎಂ ಎಂದು ಕೂಗ್ತಾ ಇದ್ದಾರೆ. ಅದಕ್ಕಿಂತ ಹೆಚ್ಚಾಗಿ ದೇವೇಗೌಡರ ಕನಸು ಏನಿತ್ತು. ದೇವೇಗೌಡರು ಅವರ ರಾಜಕೀಯ ಜೀವನದಲ್ಲಿ ಎರಡುವರೆ ವರ್ಷ ಮಂತ್ರಿ, 18 ತಿಂಗಳು ಸಿಎಂ ಆಗಿದ್ದರು ಅಷ್ಟೇ. ಆಗಲು ಅವರಿಗೆ ನೆಮ್ಮದಿಯಾಗಿ ಕೆಲಸ ಮಾಡಲು ಬಿಡ್ಲಿಲ್ಲ. ರೈತ ಬಂಧುಗಳಿಗೆ ಮನವಿ ಮಾಡ್ತೇನೆ. ರಾಜ್ಯ ಉತ್ತಮ ಸ್ಥಿತಿಗೆ ಬರಲು ಜಾತಿ ಬಿಟ್ಟು ಕೈಜೋಡಿಸಿ. ಉತ್ತರ ಕರ್ನಾಟಕದ ಜನತೆಗೆ ಮನವಿ ಮಾಡ್ತೇನೆ. ದೇವೇಗೌಡರು ರೈತ ರೈತ ರೈತ ಎಂದು ಹೋರಾಟ ಮಾಡ್ತಾರೆ. ಅವರ ರಕ್ತದ ಕಣ ಕಣದಲ್ಲೂ ರೈತ ಇರೋದು. ದೇವೇಗೌಡರು ಏನು ನೋವು ತಿಂದಿದ್ದಾರೆ ಎಲ್ಲವೂ ನನ್ನ ತಲೆಯಲ್ಲಿ ಇದೆ. ನಾನೆಂದು ರಾಜಕೀಯಕ್ಕೆ ಬರಬೇಕು ಎಂದು ಕೊಂಡಿರಲಿಲ್ಲ. ನಮ್ನ ತಂದೆ ಕೂಡ ಒತ್ತಡ ಹಾಕಿರಲಿಲ್ಲ. ಅವರಿಗೆ ನೋವು ಕೊಟ್ಟು ನಾನು ರಾಜಕೀಯಕ್ಕೆ ಬಂದಿದ್ದೇನೆ. ಈ ಜಿಲ್ಲೆಯ ಮಗನಾಗಿ ಜಿಲ್ಲೆಗೆ ಗೌರವ ತಂದು ಕೊಡುವ ಕೆಲಸ ಮಾಡಿದ್ದೇನೆ. ಹಣ ಸಂಪಾದನೆ ಮಾಡುವ ಆಕಾಂಕ್ಷೆ ನನಗಿಲ್ಲ. ನನ್ನ ಆಯಸ್ಸನ್ನ ರಾಜ್ಯದ ಪ್ರತಿ ಮನೆಗೆ ಬೆಳಕು ನೀಡಲು ಅರ್ಪಣೆ ಮಾಡಬೇಕು ಎಂದರು. ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದು ದೇವರ ದಯೆಯಿಂದ ಎರಡು ಬಾರಿ ಸಿಎಂ ಆದೆ. ಸಿಎಂ ಆಗಿ 20 ಗಂಟೆ ಕೆಲಸ ಮಾಡಿ ದೇಹ ದಂಡಿಸಿಕೊಂಡೆ ಎಂದರು.
ತಣಿಸಂದ್ರ ಕೋಗಿಲು ಗ್ರಾಮದಲ್ಲಿ ಈ ಮೈಕೊರೆಯುವ ಚಳಿಯಲ್ಲಿ ಮನೆ ಕೆಡವಿದ್ರು. ಸಿರಿಯಾ ಯುದ್ದದ ಪರಿಸ್ಥಿತಿ ರೀತಿ ಮಾಡಿದ್ರು. ಕಾಂಗ್ರೆಸ್ ನಿಮ್ಮನ್ನ ಯಾವ ರೀತಿ ಇಟ್ಟಿದೆ ಅಲ್ಪಸಂಖ್ಯಾತ ಬಂಧುಗಳು ಯೋಚನೆ ಮಾಡಿ. ಈ ಸರ್ಕಾರಕ್ಕೆ ಮಾನವೀಯತೆ ಮನುಷ್ಯತ್ವ ಇದೆಯೇ ಎಂದು ಪ್ರಶ್ನಿಸಿದರು.

