– ಆರ್ಎಸ್ಎಸ್ಗೆ ಶತಮಾನೋತ್ಸವ ಸಂಭ್ರಮ; ಸ್ಮರಣಾರ್ಥ ನಾಣ್ಯ & ಅಂಚೆ ಚೀಟಿ ಬಿಡುಗಡೆ
ನವದೆಹಲಿ: ಸ್ವಾತಂತ್ರ್ಯ ನಂತರ ಆರ್ಎಸ್ಎಸ್ ಹತ್ತಿಕ್ಕಲು ಹಲವು ಪ್ರಯತ್ನಗಳು ನಡೆದವು. ಆದರೆ, ಆರ್ಎಸ್ಎಸ್ ಯಾರ ವಿರುದ್ಧವೂ ಕಹಿ ಭಾವನೆ ಹೊಂದಲಿಲ್ಲ ಎಂದು ಪ್ರಧಾನಿ ಮೋದಿ ನೆನಪಿಸಿಕೊಂಡಿದ್ದಾರೆ.
ಆರ್ಎಸ್ಎಸ್ ಶತಮಾನೋತ್ಸವ ಹಿನ್ನೆಲೆಯಲ್ಲಿ ದೆಹಲಿಯ ಡಾ. ಅಂಬೇಡ್ಕರ್ ಅಂತರರಾಷ್ಟ್ರೀಯ ಕೇಂದ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಸ್ವಯಂಸೇವಕ ಸಂಘದ 100 ವರ್ಷಗಳ ಅದ್ಭುತ ಪಯಣವು ತ್ಯಾಗ, ನಿಸ್ವಾರ್ಥ ಸೇವೆ, ರಾಷ್ಟ್ರ ನಿರ್ಮಾಣ ಮತ್ತು ಶಿಸ್ತಿನ ಅಸಾಧಾರಣ ಉದಾಹರಣೆಯಾಗಿದೆ. ಆರ್ಎಸ್ಎಸ್ ಶತಮಾನೋತ್ಸವದ ಭಾಗವಾಗಲು ನನಗೆ ಅಪಾರ ಹೆಮ್ಮೆಯಾಗುತ್ತಿದೆ. ನಾಳೆ ವಿಜಯದಶಮಿ, ಇದು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯ. ಅನ್ಯಾಯದ ಮೇಲೆ ನ್ಯಾಯದ ವಿಜಯ, ಸುಳ್ಳಿನ ಮೇಲೆ ಸತ್ಯದ ವಿಜಯ. ಕತ್ತಲೆಯ ಮೇಲೆ ಬೆಳಕಿನ ವಿಜಯವನ್ನು ಸಂಕೇತಿಸುವ ಹಬ್ಬವಾಗಿದೆ. 100 ವರ್ಷಗಳ ಹಿಂದೆ ಈ ಮಹಾನ್ ದಿನದಂದು ಆರ್ಎಸ್ಎಸ್ ಅನ್ನು ಒಂದು ಸಂಘಟನೆಯಾಗಿ ಸ್ಥಾಪಿಸುವುದು ಕಾಕತಾಳೀಯವಲ್ಲ ಎಂದು ಬಣ್ಣಿಸಿದ್ದಾರೆ.
ಈ 100 ರೂಪಾಯಿ ನಾಣ್ಯದ ಒಂದು ಬದಿಯಲ್ಲಿ ರಾಷ್ಟ್ರೀಯ ಲಾಂಛನವಿದೆ ಮತ್ತು ಇನ್ನೊಂದು ಬದಿಯಲ್ಲಿ, ‘ವರದ ಮುದ್ರೆ’ಯಲ್ಲಿ ಸಿಂಹದ ಮೇಲೆ ಕುಳಿತಿರುವ ಭಾರತ ಮಾತೆಯ ಚಿತ್ರವಿದೆ. ಸ್ವಯಂಸೇವಕರು ಅವಳ ಮುಂದೆ ಸಮರ್ಪಣೆಯಿಂದ ನಮಸ್ಕರಿಸುತ್ತಾರೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತ ಮಾತೆಯ ಚಿತ್ರವನ್ನು ನಮ್ಮ ಕರೆನ್ಸಿಯಲ್ಲಿ ತೋರಿಸಲಾಗಿದೆ. ಇಂದು ಬಿಡುಗಡೆಯಾದ ವಿಶೇಷ ಅಂಚೆ ಚೀಟಿಯೂ ಸಹ ಅದರ ಪ್ರಾಮುಖ್ಯತೆಯನ್ನು ಹೊಂದಿದೆ. 1963 ರಲ್ಲಿ, RSS ಸ್ವಯಂಸೇವಕರು ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಹೆಮ್ಮೆಯಿಂದ ಭಾಗವಹಿಸಿದ್ದರು. ಈ ಅಂಚೆ ಚೀಟಿಯು ಆ ಐತಿಹಾಸಿಕ ಕ್ಷಣದ ಚಿತ್ರವನ್ನು ಹೊಂದಿದೆ ಎಂದು ತಿಳಿಸಿದ್ದಾರೆ.
ಸ್ವಾತಂತ್ರ್ಯದ ನಂತರವೂ ಆರ್ಎಸ್ಎಸ್ ಅನ್ನು ಹತ್ತಿಕ್ಕಲು ಪ್ರಯತ್ನಗಳು ನಡೆದವು. ಆರ್ಎಸ್ಎಸ್ ಮುಖ್ಯವಾಹಿನಿಗೆ ಬರದಂತೆ ತಡೆಯಲು ಅನಂತ ಪಿತೂರಿಗಳು ನಡೆದವು. ನಾವು ಆಕಸ್ಮಿಕವಾಗಿ ನಮ್ಮ ನಾಲಿಗೆಯನ್ನು ಹಲ್ಲುಗಳಿಂದ ಕಚ್ಚುತ್ತೇವೆ. ಆದರೆ, ಅದರರ್ಥ ನಾವು ನಮ್ಮ ಹಲ್ಲುಗಳನ್ನು ಮುರಿಯುತ್ತೇವೆ ಎಂದಲ್ಲ. ಸಂಘಟನೆಯ ವಿರುದ್ಧ ಎಲ್ಲಾ ನಿಷೇಧಗಳು ಮತ್ತು ಪಿತೂರಿಗಳ ಹೊರತಾಗಿಯೂ, ಆರ್ಎಸ್ಎಸ್ ಯಾರ ವಿರುದ್ಧವೂ ಕಹಿ ಭಾವನೆ ಹೊಂದಲಿಲ್ಲ. ಏಕೆಂದರೆ ನಾವು ಸಮಾಜದಿಂದ ಭಿನ್ನವಾಗಿಲ್ಲ, ಅದರ ಭಾಗವಾಗಿದ್ದೇವೆ ಎಂದು ನಮಗೆ ತಿಳಿದಿದೆ. ಆರ್ಎಸ್ಎಸ್ ಸ್ವಯಂಸೇವಕರು ದೇಶದ ಸಾಂವಿಧಾನಿಕ ಸಂಸ್ಥೆಗಳಲ್ಲಿ ಅಚಲ ನಂಬಿಕೆಯನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ.
ಇದಕ್ಕೂ ಮೊದಲು ವಿಶೇಷವಾಗಿ ವಿನ್ಯಾಸಗೊಳಿಸಲಾದ ಸ್ಮರಣಾರ್ಥ ನಾಣ್ಯ ಮತ್ತು ಅಂಚೆ ಚೀಟಿಯನ್ನು ಮೋದಿ ಬಿಡುಗಡೆ ಮಾಡಿದರು. ಆರ್ಎಸ್ಎಸ್ನ ಶತಮಾನೋತ್ಸವ ಕಾರ್ಯಕ್ರಮ ಹಿನ್ನೆಲೆ ವಿಶೇಷವಾಗಿ ವಿನ್ಯಾಸಗೊಳಿಸಲಾದ ಸ್ಮರಣಾರ್ಥ ಅಂಚೆ ಚೀಟಿ ಮತ್ತು ನಾಣ್ಯ ಬಿಡುಗಡೆ ಬಿಡುಗಡೆ ಮಾಡಿದರು. ಆರ್ಎಸ್ಎಸ್ ಅನ್ನು 1925 ರಲ್ಲಿ ನಾಗ್ಪುರದಲ್ಲಿ ಕೇಶವ್ ಬಲಿರಾಮ್ ಹೆಡ್ಗೆವಾರ್ ಸ್ಥಾಪಿಸಿದ್ದರು.