ಮಂಗಳೂರು: ನಗರದಲ್ಲಿ ಕಟ್ಟಡ ಕಾಮಗಾರಿ ವೇಳೆ ಮಣ್ಣು ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಣ್ಣಿನಡಿ ಸಿಲುಕಿದ್ದ ಕಾರ್ಮಿಕ ಮೃತಪಟ್ಟಿದ್ದಾರೆ.
ಬಿಹಾರ ಮೂಲದ ಚಂದನ್ (30) ಮೃತ ದುರ್ದೈವಿ. ಚಂದನ್ ರಕ್ಷಣೆಗಾಗಿ ಸತತ 7 ಗಂಟೆ ಕಾರ್ಯಾಚರಣೆ ನಡೆಸಲಾಗಿತ್ತು. ಎನ್ ಡಿ ಆರ್ ಎಫ್, ಎಸ್ ಡಿ ಆರ್ ಎಫ್, ಅಗ್ನಿಶಾಮಕದಿಂದ ರಕ್ಷಿಸಲು ತೀವ್ರ ಪ್ರಯತ್ನ ಮಾಡಿದರೂ ಪ್ರಯೋಜನವಾಗಲಿಲ್ಲ.
ಏನಿದು ಪ್ರಕರಣ..?: ನಗರದ ಬಲ್ಮಠ (Balmata, Mangaluru) ರಸ್ತೆಯಲ್ಲಿ ಕಟ್ಟಡದ ಮಣ್ಣು ಕುಸಿದು ಚಂದನ್ ಕುಮಾರ್ (30) ಮತ್ತು ರಾಜಕುಮಾರ್ (18) ಮಣ್ಣಿನಡಿ ಸಿಲುಕಿದ್ದರು. ಕೂಡಲೇ ರಕ್ಷಣಾ ಕಾರ್ಯಾಚರಣೆ ನಡೆದಿದ್ದು, ರಾಜಕುಮಾರ್ ಅವರನ್ನು ರಕ್ಷಣೆ ಮಾಡಲಾಗಿತ್ತು. ಅಲ್ಲದೇ ಅವರನ್ನು ಅಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಇದನ್ನೂ ಓದಿ: ಮಂಗಳೂರಿನ ಬಲ್ಮಠ ರಸ್ತೆಯಲ್ಲಿ ಮಣ್ಣು ಕುಸಿತ- ಓರ್ವ ಕಾರ್ಮಿಕನ ರಕ್ಷಣೆ, ಮತ್ತೋರ್ವನಿಗಾಗಿ ಶೋಧ
ಇತ್ತ ಮಣ್ಣಿನಡಿ ಸಿಲುಕಿದ್ದ ಇನ್ನೋರ್ವ ಕಾರ್ಮಿಕ ಚಂದನ್ ರಕ್ಷಣೆಗೆ ಸತತ ಪ್ರಯತ್ನ ನಡೆಸಲಾಗಿತ್ತು. ಭಾರೀ ಮಳೆಯ ನಡುವೆಯೂ ಕಾರ್ಯಾಚರಣೆ ಮುಂದುವರಿದಿತ್ತು. ಕಾಂಕ್ರೀಟ್ ಗೋಡೆಗೆ ರಂಧ್ರ ತೆಗೆದು ರಕ್ಷಣಾ ತಂಡವು ಕಾರ್ಮಿಕನನ್ನು ಪತ್ತೆಹಚ್ಚಿತ್ತು. ನಿರಂತರವಾಗಿ ಮಣ್ಣು ತೆಗೆದು ಕಾಂಕ್ರಿಟ್ ಕೊರೆದು ಕಾರ್ಮಿಕನಿಗೆ ಚಿಕಿತ್ಸೆ ನೀಡಲಾಯಿತು. ಆದರೂ ಪ್ರಯೋಜನವಾಗಲಿಲ್ಲ.