ನವದೆಹಲಿ: ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಪೆನ್ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ (Siddaramaiah) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಸುದೀರ್ಘ ಪತ್ರ ಬರೆದಿದ್ದಾರೆ.
ಪ್ರಜ್ವಲ ರೇವಣ್ಣ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಯರಿಗೆ ರಕ್ಷಣೆ ಕೊಡಬೇಕು. ಯಾರೇ ಆದರೂ ಕಠಿಣ ಕ್ರಮ ತೆಗೆದುಕೊಳ್ಳಿ. ಸಹೋದರ, ಮಗನಂತೆ ನೋಡಿಕೊಳ್ಳುತ್ತಿದ್ದ ಅನೇಕರನ್ನ ಕ್ರೂರವಾಗಿ ಪ್ರಜ್ವಲ್ ನಡೆಸಿಕೊಂಡಿದ್ದಾರೆ. ತಾಯಿಂದಿರ, ಸಹೋದರಿಯರ ಪರವಾಗಿ ಹೋರಾಡುವ ನೈತಿಕ ಕರ್ತವ್ಯ ಕಾಂಗ್ರೆಸ್ ಪಕ್ಷದ್ದು. ಈ ಪ್ರಕರಣದಲ್ಲಿ ಸಂತ್ರಸ್ತರಿಗೆ ರಕ್ಷಣೆ ನೀಡಬೇಕು ಎಂದು ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಹೆಚ್.ಡಿ.ರೇವಣ್ಣ ನಿವಾಸಕ್ಕೆ ಎಸ್ಐಟಿ ತಂಡ – ಸಂತ್ರಸ್ತೆ ಸಮ್ಮುಖದಲ್ಲಿ ಸ್ಥಳ ಮಹಜರು
ಹಾಸನದ ಹಾಲಿ ಸಂಸದರು ನಡೆಸಿದ ಭೀಕರ ಲೈಂಗಿಕ ದೌರ್ಜನ್ಯದ ಬಗ್ಗೆ ನಾನು ನಿಮಗೆ ಪತ್ರ ಬರೆಯುತ್ತಿದ್ದೇನೆ. ಪ್ರಜ್ವಲ್ ರೇವಣ್ಣ ಹಲವಾರು ವರ್ಷಗಳಿಂದ ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಅದನ್ನು ಚಿತ್ರೀಕರಿಸಿದ್ದಾರೆ. ಅವರನ್ನು ಸಹೋದರ ಮತ್ತು ಮಗನಂತೆ ನೋಡುತ್ತಿದ್ದ ಅನೇಕರನ್ನು ಅತ್ಯಂತ ಹಿಂಸಾತ್ಮಕ ರೀತಿಯಲ್ಲಿ ಕ್ರೂರವಾಗಿ ನಡೆಸಿಕೊಂಡಿದ್ದಾರೆ. ನಮ್ಮ ತಾಯಂದಿರು ಮತ್ತು ಸಹೋದರಿಯರ ಅತ್ಯಾಚಾರ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಕಠಿಣ ಸಂಭವನೀಯ ಶಿಕ್ಷೆ ಆಗಬೇಕಿದೆ ಎಂದು ತಿಳಿಸಿದ್ದಾರೆ.
ಇನ್ನೂ ಆಘಾತಕಾರಿ ಸಂಗತಿಯೆಂದರೆ, ಈ ಭೀಕರ ಆರೋಪಗಳನ್ನು ಬಿಜೆಪಿಯ ಹಿರಿಯ ನಾಯಕತ್ವದ ಗಮನಕ್ಕೆ ತಂದರೂ, ಪ್ರಧಾನಿ ಸಾಮೂಹಿಕ ಅತ್ಯಾಚಾರಿಗಾಗಿ ಪ್ರಚಾರ ಮಾಡಿದರು. ಅರ್ಥಪೂರ್ಣ ತನಿಖೆಯನ್ನು ಹಳಿತಪ್ಪಿಸಲು ಭಾರತದಿಂದ ಪಲಾಯನ ಮಾಡಲು ಕೇಂದ್ರ ಸರ್ಕಾರವು ಉದ್ದೇಶಪೂರ್ವಕವಾಗಿ ಅವಕಾಶ ನೀಡಿದೆ. ಈ ಅಪರಾಧಗಳ ಆಳವಾದ ವಿಕೃತ ಸ್ವರೂಪ ತಿಳಿದೂ ಪ್ರಧಾನ ಮಂತ್ರಿ ಮತ್ತು ಗೃಹ ಸಚಿವರು ಸಹಾಯ ಮಾಡುವುದು ಖಂಡನಾರ್ಯವಾಗಿದೆ. ಇದನ್ನೂ ಓದಿ: ಹೆಚ್.ಡಿ.ರೇವಣ್ಣ ಮನೆ ದೇವರು ಈಶ್ವರನ ಪ್ರಸಾದ ತಂದ ಅರ್ಚಕ
ಮಹಿಳೆಯರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದ್ದರೂ ಈ ಪ್ರಮಾಣದಲ್ಲಿ ಮೌನವಾಗಿರುವ ಜನಪ್ರತಿನಿಧಿಯನ್ನು ನನ್ನ ಎರಡು ದಶಕಗಳ ಸಾರ್ವಜನಿಕ ಜೀವನದಲ್ಲಿ ನೋಡಿಲ್ಲ. ಹರಿಯಾಣದ ನಮ್ಮ ಕುಸ್ತಿಪಟುಗಳಿಂದ ಹಿಡಿದು ಮಣಿಪುರದ ನಮ್ಮ ಸಹೋದರಿಯರವರೆಗೂ ಭಾರತೀಯ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳ ಬಗ್ಗೆ ಪ್ರಧಾನಿಯವರು ಮೌನವಾಗಿರುವ ಮೂಲಕ ಅಪರಾಧಿಗಳಿಗೆ ಬೆಂಬಲದ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ನಮ್ಮ ತಾಯಂದಿರು ಮತ್ತು ಸಹೋದರಿಯರಿಗೆ ನ್ಯಾಯಕ್ಕಾಗಿ ಹೋರಾಡುವ ನೈತಿಕ ಕರ್ತವ್ಯ ಕಾಂಗ್ರೆಸ್ ಪಕ್ಷದ್ದಾಗಿದೆ. ಗಂಭೀರ ಆರೋಪಗಳ ತನಿಖೆಗಾಗಿ ಕರ್ನಾಟಕ ಸರ್ಕಾರವು ವಿಶೇಷ ತನಿಖಾ ತಂಡವನ್ನು ರಚಿಸಿದೆ. ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್ಪೋರ್ಟ್ ಅನ್ನು ರದ್ದುಗೊಳಿಸಿ ಅವರನ್ನು ಶೀಘ್ರವಾಗಿ ಭಾರತಕ್ಕೆ ಹಸ್ತಾಂತರಿಸುವಂತೆ ಪ್ರಧಾನಿಗೆ ಮನವಿ ಮಾಡಲಾಗಿದೆ. ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡಬೇಕು ಎಂದು ಪತ್ರದಲ್ಲಿ ಬರೆದಿದ್ದಾರೆ.