ಎಲ್ಲಿದ್ದಾಳೆ ನಿಮ್ಮ ಗೃಹಲಕ್ಷ್ಮೀ.. ಯಾರಿಗೆ ಸಿಕ್ಕಿದೆ ನಿಮ್ಮ ಅನ್ನಭಾಗ್ಯ?- ಸಿಎಂ ವಿರುದ್ಧ ಹೆಚ್‌ಡಿಕೆ ಕಿಡಿ

Public TV
4 Min Read
HDK SIDDU

– ಅನ್ನ ಸಿಗದೇ ಜೀವ ಬಲಿಕೊಟ್ಟ ಬಡಪಾಯಿ ಯುವಕನ ಕುರಿತ ವರದಿ ಹಂಚಿಕೊಂಡು ಟೀಕೆ

ಬೆಂಗಳೂರು: ತುತ್ತು ಅನ್ನಕ್ಕೂ ಕಷ್ಟಪಡುತ್ತಿದ್ದ ಬೆಳಗಾವಿಯ ಖಾನಾಪುರ ತಾಲೂಕಿನ ಯುವಕ ಆತ್ಮಹತ್ಯೆಗೆ ಶರಣಾಗಿರುವ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಯನ್ನು ಹಂಚಿಕೊಂಡು ಕಾಂಗ್ರೆಸ್‌ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ವಿರುದ್ಧ ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ (H.D.Kumaraswamy) ಕಿಡಿಕಾರಿದ್ದಾರೆ.

ಅನ್ನಭಾಗ್ಯ, ಗೃಹಲಕ್ಷ್ಮೀ ಹೆಸರಿನಲ್ಲಿ ಲೋಕೋದ್ಧಾರ ಮಾಡಿದ್ದೇವೆ ಎಂದು ಸುಳ್ಳು ಲೆಕ್ಕ ಕೊಟ್ಟು ಜನರ ತೆರಿಗೆ ಹಣದಲ್ಲಿ ಪುಕ್ಕಟೆ ಪ್ರಚಾರ ಪಡೆಯುತ್ತಿರುವ ನಿಮ್ಮ ಲೊಳಲೊಟ್ಟೆ ಬಯಲಾಗಿದೆ ಸಿದ್ದರಾಮಯ್ಯ ನವರೇ. ನುಡಿದಂತೆ ನಡೆದಿದ್ದೇವೆ ಎಂದರೆ ಇದೇನಾ ಮುಖ್ಯಮಂತ್ರಿಗಳೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಸಂಸದರು ಗಂಡಸರಲ್ಲ, ಶೋ ಪೀಸ್‌ಗಳು: ಹೆಚ್‌ಸಿ ಬಾಲಕೃಷ್ಣ ವಿವಾದಾತ್ಮಕ ಹೇಳಿಕೆ

HDK 1

ಗ್ಯಾರಂಟಿಗಳ ಮೂಲಕವೇ ಗತಿಗೆಟ್ಟ ಕಾಂಗ್ರೆಸ್ ಪಕ್ಷದ ಹೊಟ್ಟೆ ಹೊರೆಯುತ್ತಿರುವ ಮತಿಗೆಟ್ಟ ನಿಮ್ಮ ಸರ್ಕಾರವು ಕಲ್ಯಾಣ ಕಾರ್ಯಕ್ರಮಗಳ ಕಪಟ ಪೋಷಾಕಿನಿಂದ ಮೆರೆಯುತ್ತಿದೆ. ಆ ಪೋಷಾಕು, ನಿಮ್ಮ ಢೋಂಗಿಧೀರತ್ವದ ಮುಖವಾಡ ಕಳಚಿ ನೆಲಕ್ಕೆ ಬಿದ್ದಿದೆ ಇನ್ನಾದರೂ ಎಚ್ಚೆತ್ತುಕೊಳ್ಳಿ ಎಂದು ತಿಳಿಸಿದ್ದಾರೆ.

ಅಧಿಕಾರದ ಮದವೇರಿ ಮಂಪರು ಬಿದ್ದಿರುವ ನಿಮ್ಮ ಕಂಗಳು ಆ ನತದೃಷ್ಟನ ಪ್ರಾಣಾರ್ಪಣೆಯಿಂದಲಾದರೂ ತೆರೆದುಕೊಳ್ಳಲಿ. ಇಲ್ಲವಾದರೆ, ಆ ಯುವಕನ ಸಾವಿನ ಶಾಪ ನಿಮಗೆ ತಟ್ಟದೇ ಬಿಡದು. ಎಲ್ಲಿದ್ದಾಳೆ ನಿಮ್ಮ ಗೃಹಲಕ್ಷ್ಮೀ? ಯಾರಿಗೆ ಸಿಕ್ಕಿದೆ ನಿಮ್ಮ ಅನ್ನಭಾಗ್ಯ? ನಾಚಿಕೆ, ಸಂಕೋಚ ಎನ್ನುವುದಿಲ್ಲವೇ? ಇದ್ದರೆ ಈ ಧಾರುಣಕ್ಕೆ ರಾಜ್ಯ ಸಾಕ್ಷಿಯಾಗುತ್ತಿತ್ತಾ ಎಂದು ಪ್ರಶ್ನಿಸಿದ್ದಾರೆ.

ದುಡಿದು ತಾಯಿಯನ್ನು ಸಲಹಬೇಕೆಂದು ಕನಸು ಕಟ್ಟಿಕೊಂಡು ಹೊರಟ ಹಾವೇರಿ ಜಿಲ್ಲೆ ಯಲಗಚ್ಚು ಗ್ರಾಮದ ಬಸವರಾಜ ವೆಂಕಟ ಎಂಬ ಯುವಕನ ಆತ್ಮಾಹುತಿ ಆಘಾತಕಾರಿ. ನಿಮ್ಮ ಪ್ರಚಾರಪ್ರಿಯ, ಖೊಟ್ಟಿ ಗ್ಯಾರಂಟಿಗಳ ಸರ್ಕಾರದ ಆತ್ಮಸಾಕ್ಷಿಗೆ ಎದುರಾದ ದೊಡ್ಡ ಸವಾಲು ಎಂದಿದ್ದಾರೆ. ಇದನ್ನೂ ಓದಿ: ಲೋಕಸಭೆಗೆ ಅಲ್ಲ, ರಾಜ್ಯಸಭೆಗೆ ದೆಹಲಿಯಲ್ಲಿ ವಿ.ಸೋಮಣ್ಣ ಲಾಬಿ!

ಟಿಕೆಟ್ ಇಲ್ಲದೆ ರೈಲಿನಿಂದ ಹೊರದಬ್ಬಿಸಿಕೊಂಡ ಈತ, ಧಾರವಾಡ ಆಳ್ನಾವರದಲ್ಲಿ ಹೆತ್ತಮ್ಮಗೆ ಅನ್ನ ಅರಸುತ್ತಾ, ದುಡಿಮೆ ಹುಡುಕುತ್ತಾ ಹೊರಟ. ಎಲ್ಲಿಯೂ ಅವಕಾಶ ಸಿಗದೆ ಕೈ ಚೆಲ್ಲಿ ನೇಣಿಗೆ ಕೊರಳು ಒಡ್ಡಿದ್ದಾನೆ. ಮೂರು ನಾಲ್ಕು ದಿನ ತಾಯಿ ಮಗ ಇಬ್ಬರೂ ಅನ್ನಕ್ಕಾಗಿ ಪರಿತಪಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಈ ತಾಯಿಯ ಕುಟುಂಬಕ್ಕೆ ಅನ್ನಭಾಗ್ಯ ಏಕೆ ತಲುಪಿಲ್ಲ? ಗೃಹಲಕ್ಷ್ಮೀ ಅವರ ಮನೆ ಬಾಗಿಲಿಗೆ ಹೋಗಿಲ್ಲವೇಕೆ? ಇದಕ್ಕೆ ನೀವೇ ಹೊಣೆ ಸಿದ್ದರಾಮಯ್ಯನವರೇ. 15ನೇ ಬಜೆಟ್ ಮಂಡಿಸುವ ಉಮೇದಿನಲ್ಲಿರುವ ನೀವು ಈ ‘ಸತ್ತ ಸರ್ಕಾರದ ಸಾಹುಕಾರ’ನಷ್ಟೇ. ನಿಮ್ಮ ಸೋಗಲಾಡಿ ಸಮಾಜವಾದ ಬೆತ್ತಲಾಗಿದೆ. ಅನ್ನಕ್ಕಾಗಿ ಸಂಭವಿಸಿದ ಈ ಆತ್ಮಹತ್ಯೆ ಇಡೀ ನಾಡಿಗೇ ಕಪ್ಪುಚುಕ್ಕೆ ಎಂದು ಹೇಳಿದ್ದಾರೆ.

ಈ ವರದಿ ನಿಮ್ಮ ಸರ್ಕಾರದ ಮತ್ತು ನಿಮ್ಮನ್ನು ಕಟಕಟೆಯಲ್ಲಿ ನಿಲ್ಲಿಸಿದೆ. ಸ್ವತಃ ನೀವೇ ಈ ಯುವಕನ ಸಾವಿಗೆ ಕಾರಣ ಮತ್ತು ನೇರ ಹೊಣೆ. ರಾಜ್ಯಕ್ಕೆ ನೀವೇ ಸಮಜಾಯಿಷಿ ಕೊಡಬೇಕು ಹಾಗೂ ಶಾಂತವ್ವನಿಗೆ ತಕ್ಷಣವೇ ಸೂಕ್ತ ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಅಂಧ ಭಕ್ತರು ಹೆಚ್ಚಿರುವ ರಾಜ್ಯಗಳಿಗೆ ಹೆಚ್ಚಿನ ಅನುದಾನ ನೀಡಿ ಮತಬ್ಯಾಂಕ್ ಗಟ್ಟಿ ಮಾಡಿಕೊಳ್ಳುವ ಹುನ್ನಾರ: ಹರಿಪ್ರಸಾದ್ ವಾಗ್ದಾಳಿ

ಇನ್ನೊಂದು ಸಲಹೆ ಹಳ್ಳ ಹಿಡಿದಿರುವ ನಿಮ್ಮ ಗ್ಯಾರಂಟಿಗಳನ್ನು ಸರಿದಾರಿಗೆ ತನ್ನಿ. ಅವುಗಳ ವೈಫಲ್ಯವನ್ನು ಪರಾಮರ್ಶೆ ಮಾಡಿ. ಅಧಿಕಾರಿಗಳ ಕಿವಿ ಹಿಂಡಿ ಕೆಲಸ ಮಾಡಿಸಿ. ನಿಮಗೆ ಆತ್ಮಸಾಕ್ಷಿ ಎನ್ನುವುದು ಇದ್ದರೆ ಮೊದಲು ಈ ಕೆಲಸ ಮಾಡಿ. ಅನ್ನಕ್ಕಾಗಿ ಜೀವತೆತ್ತ ಯುವಕನ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಆ ತಾಯಿಯ ಆರೋಗ್ಯ ಸುಧಾರಿಸಲಿ ಎಂದು ಎಕ್ಸ್‌ನಲ್ಲಿ ಹೆಚ್‌ಡಿಕೆ ಪೋಸ್ಟ್‌ ಹಾಕಿದ್ದಾರೆ.

Share This Article