ನವದೆಹಲಿ: ಅಯೋಧ್ಯೆಯ ರಾಮ ಮಂದಿರದ (Ram Mandir) ಸ್ಮರಣಾರ್ಥ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿದ್ದಾರೆ. ಈ ಅಂಚೆ ಚೀಟಿಗಳು (Postage Stamps) ಐತಿಹಾಸಿಕ ಘಟನೆಯ ಸಾಕ್ಷಿಯಾಗಿ ಮತ್ತು ಅದರ ಸುತ್ತಲಿನ ವಿಚಾರಗಳನ್ನು ಭವಿಷ್ಯಕ್ಕೆ ತಿಳಿಸುವ ಸಂಕೇತಗಳಾಗಿ ಉಳಿಯುತ್ತವೆ ಎಂದಿದ್ದಾರೆ.
ದೇಗುಲದ ಸ್ಮರಣಾರ್ಥ ಅಂಚೆ ಚೀಟಿಗಳು ಮತ್ತು ಭಗವಾನ್ ರಾಮನ ಕುರಿತಾದ ಅಂಚೆಚೀಟಿಗಳ ಪುಸ್ತಕದ ಬಿಡುಗಡೆಯ ಬಳಿಕ, ಅಂಚೆ ಚೀಟಿಗಳು ಭವಿಷ್ಯದ ಪೀಳಿಗೆಗೆ ಇತಿಹಾಸ ಮತ್ತು ರಾಮಮಂದಿರದ ಕುರಿತಾದ ಐತಿಹಾಸಿಕ ಕ್ಷಣಗಳನ್ನು ತಲುಪಿಸುವ ಮಾಧ್ಯಮಗಳಾಗಿವೆ. ಈ ಅಂಚೆ ಚೀಟಿಗಳು ಕೇವಲ ಕಾಗದದ ತುಣುಕುಗಳು ಅಥವಾ ಕೇವಲ ಕಲಾಕೃತಿಗಳಲ್ಲ. ಅವು ರಾಮಾಯಣದ ಕುರಿತಾದ ತಮ್ಮದೇ ಆದ ವಿಶಿಷ್ಟ ಗುರುತುಗಳನ್ನು ಹೊಂದಿವೆ ಎಂದಿದ್ದಾರೆ. ಇದನ್ನೂ ಓದಿ: ಜ.22ರಂದು ಕೇಂದ್ರ ಸರ್ಕಾರಿ ನೌಕರರಿಗೆ ಅರ್ಧ ದಿನ ರಜೆ
ಇಂದು ಬಿಡುಗಡೆ ಮಾಡಲಾದ ಅಂಚೆ ಚೀಟಿಗಳಿಂದ ಯುವಕರು ಬಹಳಷ್ಟು ಕಲಿಯುತ್ತಾರೆ. ಅಂಚೆ ಚೀಟಿಯಲ್ಲಿ ರಾಮ್ ಚರಿತ್ ಮಾನಸ್ನ ಶ್ಲೋಕವಿದೆ. ದೇಶಕ್ಕೆ ಸಕಾರಾತ್ಮಕ ಸಂದೇಶವನ್ನು ನೀಡುವ ಸೂರ್ಯನ ಚಿತ್ರವಿದೆ. ಅಲ್ಲದೇ ಸರಯು ನದಿಯ (Saryu River) ಚಿತ್ರಣವೂ ಇದರಲ್ಲಿದೆ. ಇದರೊಂದಿಗೆ ಭಗವಾನ್ ರಾಮನ, ಪಂಚತಂತ್ರದ ತತ್ತ್ವವನ್ನು ಆಲ್ಬಮ್ನಲ್ಲಿ ಚಿಕಣಿ ರೂಪದಲ್ಲಿ ಚಿತ್ರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇಂದು ಬಿಡುಗಡೆಯಾದ ಆರು ಸ್ಮರಣಾರ್ಥ ಅಂಚೆಚೀಟಿಗಳು ಅಯೋಧ್ಯೆಯಲ್ಲಿನ ರಾಮಮಂದಿರ, ಗಣೇಶ, ಹನುಮಾನ್, ಜಟಾಯು, ಕೇವತ್ರಾಜ್ ಮತ್ತು ಶಬರಿಯನ್ನು ಒಳಗೊಂಡಿವೆ. ಪ್ರತಿಯೊಂದೂ ಭಗವಾನ್ ರಾಮನಿಗೆ ಸಂಬಂಧಿಸಿದ ವಿಚಾರಗಳಾಗಿವೆ.ಅಲ್ಲದೇ 48-ಪುಟಗಳ ಪುಸ್ತಕದಲ್ಲಿ ಅಮೆರಿಕ, ನ್ಯೂಜಿಲೆಂಡ್, ಸಿಂಗಾಪುರ್, ಕೆನಡಾ ಮತ್ತು ಕಾಂಬೋಡಿಯಾ ಸೇರಿದಂತೆ 20 ಕ್ಕೂ ಹೆಚ್ಚು ದೇಶಗಳು ಹೊರಡಿಸಿದ ಅಂಚೆಚೀಟಿಗಳನ್ನು ಒಳಗೊಂಡಿದೆ. ಇದೆಲ್ಲ ದೇಶಗಳ ನಡುವಿನ ಗಡಿಗಳನ್ನೂ ಮೀರಿ ಸಂಪರ್ಕ ಸಾಧಿಸಲು ಸಹಕಾರಿಯಾಗುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಬೆಂಗಳೂರು-ಅಯೋಧ್ಯೆ ಏರ್ ಇಂಡಿಯಾ ವಿಮಾನದಲ್ಲಿ ರಾಮಜಪ, ಭಜನೆ