ಪ್ರೇಕ್ಷಕರ ಗಮನ ಸೆಳೆಯುತ್ತಿದೆ ‘ಆಡೇ ನಮ್ Godʼ ಟೀಸರ್

Public TV
3 Min Read
aade namma god 2

ಸ್ಯಾಂಡಲ್‌ವುಡ್ (Sandalwood) ಮತ್ತೊಂದು ವಿಭಿನ್ನ ಪ್ರಯತ್ನದ ಸಿನಿಮಾವೊಂದು ರಿಲೀಸ್‌ಗೆ ಸಿದ್ಧವಾಗಿದೆ. ಆಡು ಸ್ವಾಮಿಯ ಮಹಿಮೆ ಸಾರುವ ‘ಆಡೇ ನಮ್ Godʼ (Aade Nam God) ಸಿನಿಮಾದ ಟೀಸರ್ ಮೂಲಕ ಸಂಚಲನ ಸೃಷ್ಟಿಸುತ್ತಿದೆ. ಸಿನಿಮಾದ ಟೀಸರ್‌ಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

aadhe namma god

ಬಿ.ಬಿ.ಆರ್ ಫಿಲ್ಮಂಸ್ ಹಾಗೂ ಎವೆರೆಸ್ಟ್ ಇಂಡಿಯಾ ಎಂಟರ್‌ಟೈನರ್ಸ್ ಬ್ಯಾನರ್ ಅಡಿ ಪ್ರೊ.ಬಿ.ಬಸವರಾಜ್- ರೇಣುಕಾ ಬಸವರಾಜ್ ಚೊಚ್ಚಲ ಬಾರಿಗೆ ನಿರ್ಮಾಣ ಮಾಡಿರುವ ‘ಆಡೇ ನಮ್ God’ ಸಿನಿಮಾದ ಟೀಸರ್ ಬೆಂಗಳೂರಿನ ಸುಚಿತ್ರ ಅಕಾಡೆಮಿಯಲ್ಲಿಂದು ಬಿಡುಗಡೆ ಮಾಡಲಾಯಿತು. ಆಡನ್ನು ದೇವರಾಗಿ ಪೂಜೆ ಮಾಡಿದಾಗ ಏನೆಲ್ಲಾ ಆಗುತ್ತದೆ ಎಂಬುದನ್ನು ಹಾಸ್ಯಾಸ್ಪದವಾಗಿ ಕಟ್ಟಿಕೊಡಲಾಗಿದೆ. ‘ರಾಮ ರಾಮ ರೇ’ ಸಿನಿಮಾ ಖ್ಯಾತಿಯ ನಟರಾಜ್, ಮಂಜುನಾಥ್ ಜಂಬೆ, ಅಜಿತ್ ಬೊಪ್ಪನಹಳ್ಳಿ, ಪಿಂಕಿ ಎಲ್ಲಿ ಚಿತ್ರದ ಅನೂಪ್ ಶೂನ್ಯ, ಸಾರಿಕ ರಾವ್, ಬಿ ಸುರೇಶ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಪಂಚಮ ವೇದ, ಶ್ರೀಗಂಧ, ಅರಗಿಣಿ, ಅರುಣೋದಯ, ರಂಗೋಲಿ, ಅಂಡಮಾನ್, ಮುಂಜಾನೆ ಮಂಜು, ಮುಸುಕು ಸಿನಿಮಾಗಳ ಖ್ಯಾತಿ ಹಿರಿಯ ನಿರ್ದೇಶಕ ಪಿ.ಎಚ್.ವಿಶ್ವನಾಥ್ ಅವರು ನಿರ್ದೇಶನ ಮಾಡಿದ್ದಾರೆ. ಸಿನಿಮಾ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

aade namma god

ನಿರ್ದೇಶಕರಾದ ಪಿ.ಎಚ್.ವಿಶ್ವನಾಥ್ ಮಾತನಾಡಿ, ಜನಗಳು ಯಾವುದಾದರೂ ಒಂದು ವಿಷಯಕ್ಕೆ ಬೇಗ ಪ್ರಭಾವಕ್ಕೆ ಒಳಗಾಗುತ್ತಾರೆ. ನಮ್ಮಲ್ಲಿ ಹಂದಿಯನ್ನು ವರಾಹ ಎಂದು ಪೂಜೆ ಮಾಡುತ್ತಾರೆ. ಹಾವು, ಕಪ್ಪೆ ಮೊಸಳೆ ಎಲ್ಲವನ್ನೂ ಪೂಜೆ ಮಾಡುತ್ತವೆ. ನಾವು ಪೂಜೆ ಮಾಡದ ಪ್ರಾಣಿಗಳು ಇಲ್ಲ. ಆಂದ್ರದ ಬಾರ್ಡರ್ ಊರೊಂದರಲ್ಲಿ ಚೇಳು ಸ್ವಾಮಿ ದೇಗುಲವಿದೆ ಜೀವಂತ ಚೇಳುಗಳನ್ನು ಪೂಜೆ ಮಾಡುತ್ತಾರೆ. ಈ ಬಗ್ಗೆ ಯೋಚನೆ ಮಾಡುತ್ತಾ ನಾನು ಕಂಡ ಒಬ್ಬ ವ್ಯಕ್ತಿ ಮತ್ತು ನನಗೇ ಆದ ಅನುಭವಗಳ ಆಧಾರದ ಮೇಲೆ ಆಡು ಕೂಡ ಒಂದು ದೇವರು ಆಗಬಹುದು ಅನ್ನಿಸಿ ಅದನ್ನೇ ಚಿತ್ರವಾಗಿಸಿದ್ದೇವೆ. ಮೂಢನಂಬಿಕೆ ನಂಬಿಕೊಂಡು ಹೋಗುವ ಜನರ ಹಿಂದೆ ಇಡೀ ಸಿನಿಮಾವಿದೆ. ನಾಲ್ಕು ಜನ ಯುವಕರ ಜೀವನದಲ್ಲಿ ಒಂದು ಆಡು ಬಂದಾಗ ಏನಾಗುತ್ತದೆ ಎನ್ನುವುದು ಚಿತ್ರದ ತಿರುಳು. ನಾಲ್ಕೂ ಜನ ಯುವಕರು ಯಾವ ನುರಿತ ಕಲಾವಿದರಿಗಿಂತ ಕಡಿಮೆ ಇಲ್ಲದಂತೆ ನಟಿಸಿದ್ದು, ಚಿತ್ರವನ್ನು ಮನರಂಜನೆಯೊಂದಿಗೆ ಪ್ರೇಕ್ಷಕರಿಗೆ ಖುಷಿಕೊಡುವ ರೀತಿಯಲ್ಲಿ, ಕೊನೆಯವರೆಗೂ ಹಾಸ್ಯಮಯವಾಗಿ ಕಟ್ಟಿಕೊಡಲಾಗಿದೆ, ‘ಆಡೇ ನಮ್ Godʼ ಯಾವ ಕಟ್ಸ್ ಇಲ್ಲದೇ ಸೆನ್ಸಾರ್ ಆಗಿ ಬಿಡುಗಡೆಯ ಸಿದ್ಧತೆಯಲ್ಲಿದೆ ಎಂದರು. ಇದನ್ನೂ ಓದಿ:ಚೆಕ್ ಬೌನ್ಸ್ ಕೇಸ್‌ನಲ್ಲಿ ನಟ ನೀನಾಸಂ ಅಶ್ವಥ್ ಬಂಧನ

aade namma god 1

ನಿರ್ಮಾಪಕರಾದ ಪ್ರೊ.ಬಿ.ಬಸವರಾಜ್ ಮಾತನಾಡಿ, ನಾನು ನಿವೃತ್ತಿ ಪ್ರೊಫೆಸರ್. ನಾನು ಮೊದಲಿನಿಂದಲೂ ಸಿನಿಮಾ ನೋಡುತ್ತಿದ್ದೆ. ನನಗೂ ಸಿನಿಮಾ ನಿರ್ಮಾಣ ಮಾಡುವ ಆಸೆ ಇತ್ತು. ರಿಟೈಡ್ ಆದ ಹತ್ತು ವರ್ಷದ ಬಳಿಕ ನನ್ನ ಆಸೆ ನೆರವೇರಿದೆ. ಪಿ ಎಚ್ ವಿಶ್ವನಾಥ್ ಹೆಸರಾಂತ ನಿರ್ದೇಶಕರು. ಆರು ತಿಂಗಳು ಲೊಕೇಷನ್ ನೋಡಿದೆವು. ಮೈಸೂರು ಹಾಗು ಬೆಂಗಳೂರಿನ ಸುತ್ತ ಮುತ್ತ ಯಾವ ರೀತಿಯ ಅಡಚಣೆಯೂ ಇಲ್ಲದೆ ಸರಾಗವಾಗಿ ಚಿತ್ರ ಮುಗಿದಿದೆ. ಸಿನಿಮಾ ಬಹಳ ಚೆನ್ನಾಗಿ ಬಂದಿದೆ ಎಂದರು.

ಹಿರಿಯ ನಟ ಬಿ.ಸುರೇಶ್ ಮಾತನಾಡಿ, ಕೊರೋನಾ ನಂತರದ ಕಾಲಘಟ್ಟದಲ್ಲಿ ಸಿನಿಮಾ ಮಾಡುವುದು ಸುಲಭದ ಕೆಲಸವಲ್ಲ. ಮೊದಲು ಸುಲಭ ಇತ್ತು ಅಂತಲ್ಲ. ಬಸವರಾಜ್ ಹಾಗೂ ವಿಶ್ವನಾಥ್ ಅವರು ದೊಡ್ಡ ಸಾಹಸ ಮಾಡಿದ್ದಾರೆ. ತುಂಬಾ ವಿಶಿಷ್ಟವಾದ ಕಥೆ. ಪಿ ಎಚ್ ವಿಶ್ವನಾಥ್ ಅವರ ಬಗ್ಗೆ ಹೊಸದಾಗಿ ಹೇಳುವ ಅವಶ್ಯಕತೆ ಇಲ್ಲ. ಅವರ ಪಂಚಮವೇದ ಚಿತ್ರದಿಂದ ಇಲ್ಲಿವರೆಗೂ ಹಲವಾರು ಬಗೆಯ ಸಿನಿಮಾ ಮಾಡಿದ್ದಾರೆ. ಹೊಸಬರಿಗೆ ನಟನೆಯ ಭಾಷೆ, ಸಿನಿಮಾ ಹೇಳಿಕೊಟ್ಟಿದ್ದಾರೆ ಎಂದರು. ನಟ ನಟರಾಜ್ ಮಾತನಾಡಿ, ಪುಟ್ಟಣ್ಣ ಕಣಗಾಲ್ ಸರ್ ಬಗ್ಗೆ ನಾವು ಕೇಳುತ್ತಿದ್ದೆವು. ಅವರ ಶಿಷ್ಯ ಅಂದರೆ ಹೇಗೆ ಇರ್ತಾರೆ ಎಂಬ ಭಯ ಇತ್ತು. ನೀನು ಮಾಡಿರುವ ಸಿನಿಮಾ ಎಲ್ಲಾ ನೋಡಿದ್ದೇನೆ ಕಥೆ ಹೇಳಬಹುದಾ ಎಂದರು. ಇಡೀ ಚಿತ್ರದ ಕಥೆ ಹೇಳಿದರು. ಬಳಿಕ ನನ್ನ ಪಾತ್ರದ ಬಗ್ಗೆ ತಿಳಿಸಿದರು. ಇಂತಹ ದಿಗ್ಗಜರ ಜೊತೆ ಸಿನಿಮಾ ಮಾಡಿರುವುದು ಖುಷಿ ಕೊಟ್ಟಿದೆ. ಸಾಂಗ್ಸ್, ಸಿನಿಮಾ ಎಲ್ಲವೂ ಚೆನ್ನಾಗಿ ಮೂಡಿಬಂದಿದೆ. ಹಿರಿಯ ತಂತ್ರಜ್ಞರ ಜೊತೆ ಕೆಲಸ ಮಾಡಿರುವುದು ದೊಡ್ಡ ಅನುಭವ ಎಂದರು.

aade

ಪಿ.ಕೆ.ಎಚ್ ದಾಸ್ ಛಾಯಾಗ್ರಹಣ, ಬಿ.ಎಸ್.ಕೆಂಪರಾಜು ಸಂಕಲನ, ಹೊಸ್ಮನೆ ಮೂರ್ತಿ ಕಲಾ ನಿರ್ದೇಶನ, ಅಕ್ಷಯ್ ವಿಶ್ವನಾಥ್ ಚಿತ್ರಕಥೆ-ಸಹ ನಿರ್ದೇಶನ ‘ಆಡೇ ನಮ್ God’ ಚಿತ್ರಕ್ಕಿದೆ. ಆರ್.ಕೆ. ಸ್ವಾಮಿನಾಥನ್ ಸಂಗೀತ, ಶಶಿಕುಮಾರ್ ಎಸ್ ಹಿನ್ನೆಲೆ ಸಂಗೀತದ ಹಾಡುಗಳಿಗೆ ಹೃದಯ ಶಿವ-ನಿತಿನ್ ನಾರಾಯಣ್ ಸಾಹಿತ್ಯ ಬರೆದಿದ್ದು, ರವೀಂದ್ರ ಸೊರಗಾವಿ-ಚೇತನ್ ನಾಯಕ್ ಧ್ವನಿಯಾಗಿದ್ದಾರೆ. ಶೀಘ್ರದಲ್ಲಿಯೇ ಚಿತ್ರವನ್ನು ತೆರೆಗೆ ತರಲು ತಂಡ ತಯಾರಿ ನಡೆಸುತ್ತಿದೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article