ಗದಗ: ನಗರದ (Gadag) ದಾಸರ ಓಣಿಯಲ್ಲಿ ಏ.19 ರಂದು ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಕುಟುಂಬವನ್ನು ಮುಗಿಸಲು ಕುಟುಂಬದ ಪ್ರಕಾಶ್ ಬಾಕಳೆ ಮಗನೇ ಸುಪಾರಿ ಕೊಟ್ಟಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ಐಜಿಪಿ ವಿಕಾಸಕುಮಾರ್ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡಿದ್ದಾರೆ. ಅವರ ಮಗ ವಿನಾಯಕ, ಕುಟುಂಬದವರನ್ನು ಮುಗಿಸಲು ಹಂತಕರಿಗೆ 65 ಲಕ್ಷ ರೂ. ಹಣ ಕೊಡುವುದಾಗಿ ಮಾತಾಡಿದ್ದ. ಅಲ್ಲದೇ ಮುಂಗಡವಾಗಿ 2 ಲಕ್ಷ ರೂ. ಕೊಟ್ಟಿದ್ದ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ!
ಬಿಜೆಪಿ ನಾಯಕಿ, ಗದಗ ಬೆಟಗೇರಿ ನಗರಸಭೆ ಉಪಾಧ್ಯಕ್ಷೆ (Bettagere Municipal Vice President) ಸುನಂದಾ ಬಾಕಳೆಯವರ (Sunanda Bakale) ಮನೆಗೆ ನುಗ್ಗಿದ್ದ ಹಂತಕರು ಕಾರ್ತಿಕ್ ಬಾಕಳೆ (28), ಪರಶುರಾಮ್ ಹಾದಿಮನಿ (55), ಲಕ್ಷ್ಮೀ ಹಾದಿಮನಿ (45) ಆಕಾಂಕ್ಷಾ (16) ಹತ್ಯೆಮಾಡಿದ್ದರು. ಕೊಲೆಯಾದ ದಿನ ಸ್ಥಳದಲ್ಲಿಯೇ ಆರೋಪಿ ವಿನಾಯಕ ಇದ್ದ. ಅಲ್ಲದೇ ಆತನೇ ಪೊಲೀಸರಿಗೆ ಖುದ್ದಾಗಿ ಮಾಹಿತಿ ಕೊಟ್ಟದ್ದ. ಈ ವೇಳೆ ತನಗೆ ಏನು ಗೊತ್ತಿಲ್ಲದಂತೆ ವರ್ತಿಸಿದ್ದ.
ಆರೋಪಿ ವಿನಾಯಕ ಪ್ರಕಾಶ್ ಬಾಕಳೆ ಮೊದಲ ಹೆಂಡತಿ ಮಗನಾಗಿದ್ದು, ಆಸ್ತಿ ವಿಚಾರದ ವೈಷಮ್ಯದಿಂದ ಮಹಾರಾಷ್ಟ್ರ ಮೂಲದ ಫಯಾಜ್ ಗ್ಯಾಂಗ್ಗೆ ಸುಪಾರಿ ಕೊಟ್ಟಿದ್ದ ಎಂದು ತಿಳಿದು ಬಂದಿದೆ.
ಈ ಸಂಬಂಧ ಆರೊಪಿಗಳಾದ ವಿನಾಯಕ ಫೈರೋಜ್ ಖಾಜಿ, ಜಿಶಾನ್ ಖಾಜಿ, ಸಾಹಿಲ್ ಖಾಜಿ, ಸೊಹೇಲ್ ಖಾಲಿ, ಸುಲ್ತಾನ್ ಶೇಖ್, ಮಹೇಶ್ ಸಾಳೊಂಕೆ, ವಾಹಿದ್ ಬೇಪಾರಿ ಎಂಬವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಭಾಗ್ಯಗಳನ್ನು ಕೊಟ್ಟು ರಾಜ್ಯವನ್ನ ದುಸ್ಥಿತಿಗೆ ತಂದರು: ಕಾಂಗ್ರೆಸ್ ವಿರುದ್ಧ ಸಿ.ಸಿ.ಪಾಟೀಲ ಕಿಡಿ