ನವದೆಹಲಿ: ಕಳೆದ ಐದು ವರ್ಷದಲ್ಲಿ ಬ್ಯಾಂಕ್ಗಳಿಗೆ ವಂಚಿಸಿ ವಿದೇಶಕ್ಕೆ ಹೋದ ಪಲಾಯಾನವಾದಿಗಳ ಸಂಖ್ಯೆ ಎಷ್ಟು ಎಂಬ ಪ್ರಶ್ನೆಗೆ ವಿತ್ತ ರಾಜ್ಯ ಸಚಿವ ಅನುರಾಗ್ ಠಾಕೂರ್ ಲೋಕಸಭೆ ಅಧಿವೇಶನದಲ್ಲಿ ಉತ್ತರ ನೀಡಿದ್ದಾರೆ. ಬ್ಯಾಂಕ್ ಗಳಿಗೆ ವಂಚನೆ ಕುರಿತು ವಿಪಕ್ಷಗಳು ಸರ್ಕಾರದ ವಿರುದ್ಧ ಪ್ರಶ್ನೆ ಮಾಡುತ್ತಿರುತ್ತವೆ. ಮಾನ್ಸೂನ್ ಅಧಿವೇಶನದ ಮೊದಲ ದಿನವೇ ಬ್ಯಾಂಕ್ ವಂಚನೆಕಾರರ ಬಗ್ಗೆ ಮಾಹಿತಿ ಕೇಳಲಾಗಿತ್ತು.
ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಪ್ರಕಾರ ಕಳೆದ ಐದು ವರ್ಷದಲ್ಲಿ ಬರೋಬ್ಬರಿ 38 ಆರೋಪಿಗಳು ಬ್ಯಾಂಕ್ಗಳಿಗೆ ವಂಚಿಸಿ ವಿದೇಶಗಳಿಗೆ ಪಲಾಯಾನ ಮಾಡಿದ್ದಾರೆ. ಈ ಸಂಖ್ಯೆ ಜನವರಿ 1, 2015 ರಿಂದ ಡಿಸೆಂಬರ್ 31, 2019ರ ನಡುವೆ ಬ್ಯಾಂಕ್ ವ್ಯವಹಾರಗಳಲ್ಲಾದ ವಂಚನೆಗಳ ಪ್ರಕರಣಗಳಿಗೆ ಸಂಬಂಧಿಸಿದ್ದಾಗಿದೆ. ಈ ಎಲ್ಲ ಪ್ರಕರಣಗಳ ತನಿಖೆಯನ್ನ ಸಿಬಿಐ ಮೂಲಕ ನಡೆಸಲಾಗುತ್ತಿದೆ ಎಂದು ವಿತ್ತ ರಾಜ್ಯ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ.
ಮಲ್ಯ, ನೀರವ್ ಮೋದಿ ಹೆಸ್ರು ಸೇರ್ಪಡೆ: 38 ಆರೋಪಿಗಳಲ್ಲಿ ವಿಜಯ್ ಮಲ್ಯ, ನೀರವ್ ಮೋದಿ ಹೆಸರುಗಳಿವೆ. ವಿವಿಧ ಬ್ಯಾಂಕುಗಳಿಗೆ ವಿಜಯ್ ಮಲ್ಯ 9 ಸಾವಿರ ಕೋಟಿ ವಂಚಿಸಿದ್ದು, ನೀರವ್ ಮೋದಿ ಮತ್ತು ಮೆಹುಲ್ ಚೊಕ್ಸಿ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 12 ಸಾವಿರ ಕೋಟಿ ವಂಚಿಸಿ ವಿದೇಶದಲ್ಲಿ ಉಳಿದುಕೊಂಡಿದ್ದಾರೆ. ಆರೋಪಿಗಳ ಪಟ್ಟಿಯಲ್ಲಿ ಈ ಮೂವರ ಕುಟುಂಬಸ್ಥರ ಹೆಸರುಗಳಿವೆ. ಇದರ ಜೊತೆಗೆ 15 ಸಾವಿರ ಕೋಟಿ ಫ್ರಾಡ್ ಆರೋಪಿ ಸಂದೇಸಾರ ಸಮೂಹದ ಮಾಲೀಕ ಮತ್ತು ಆಪ್ತರು ಸಹ ದೇಶ ತೊರೆದಿದ್ದಾರೆ. ಇದನ್ನೂ ಓದಿ: ಉದ್ಯಮಿ ವಿಜಯ್ ಮಲ್ಯಗೆ ಹಿನ್ನಡೆ – ಪುನರ್ ಪರಿಶೀಲನಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್
ಜನವರಿ 4, 2019ರಂದು ಸರ್ಕಾರ ಬ್ಯಾಂಕ್ಗಳಿಗೆ ವಂಚನೆ ಮಾಡಿದ ಆರೋಪಿಗಳ ಸಂಖ್ಯೆ 27 ಎಂದು ಹೇಳಿತ್ತು. ಎರಡೂವರೆ ವರ್ಷದಲ್ಲಿ ಈ ಸಂಖ್ಯೆ 38ಕ್ಕೆ ಏರಿಕೆಯಾಗಿದೆ. ದೇಶದ ಹಣವನ್ನ ಕೊಳ್ಳೆ ಹೊಡೆದು ಹೋಗುವವರನ್ನು ತಡೆಯುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ವಿಪಕ್ಷ ನಾಯಕರು ಕಿಡಿ ಕಾರಿದರು. ಇದನ್ನೂ ಓದಿ: ವಿಜಯ್ ಮಲ್ಯ ಭಾರತದ ಮೊದಲ ‘ದೇಶಭ್ರಷ್ಟ ಆರ್ಥಿಕ ಅಪರಾಧಿ’
ಇದೇ ವೇಳೆ ಸದನದಲ್ಲಿ ಉತ್ತರಿಸಿದ ಅನುರಾಗ್ ಠಾಕೂರ್, ವಿದೇಶಕ್ಕೆ ಓಡಿ ಹೋಗಿರುವ 20 ಆರೋಪಿಗಳ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಅಂತರಾಷ್ಟ್ರೀಯ ಇಂಟರ್ಪೋಲ್ ಸಂಸ್ಥೆಗೂ ಪ್ರಕರಣಗಳ ಮಾಹಿತಿ ನೀಡಲಾಗಿದೆ. ಆರೋಪಿಗಳನ್ನು ಭಾರತದ ವಶಕ್ಕೆ ನೀಡುವಂತೆ ಅಲ್ಲಿ ಸರ್ಕಾರಗಳಿಗೆ ಮನವಿಯನ್ನ ಸಹ ಸಲ್ಲಿಸಲಾಗಿದ ಎಂದರು. ಇದನ್ನೂ ಓದಿ: ನನ್ನನ್ನು ಭಾರತಕ್ಕೆ ಹಸ್ತಾಂತರಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ – ನೀರವ್ ಮೋದಿ