ಲಂಡನ್: ನನ್ನನ್ನು ಭಾರತಕ್ಕೆ ಹಸ್ತಾಂತರಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ಆರೋಪಿ ನೀರವ್ ಮೋದಿ ಲಂಡನ್ ನ್ಯಾಯಾಲಯದಲ್ಲಿ ಹೇಳಿದ್ದಾನೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ)ಗೆ 13,500 ಕೋಟಿಯನ್ನು ವಂಚನೆ ಮಾಡಿ ದೇಶ ಬಿಟ್ಟು ಓಡಿ ಹೋಗಿರುವ ಉದ್ಯಮಿ ನೀರವ್ ಮೋದಿಯನ್ನು ಯುಕೆ ಪೊಲೀಸರು ಬಂಧಿಸಿದ್ದಾರೆ. ಹಾಗಾಗಿ ನನಗೆ ಜಾಮೀನು ನೀಡುವಂತೆ ನೀರವ್ ಸಲ್ಲಿಸಿದ್ದ ಅರ್ಜಿಯನ್ನು ಅಲ್ಲಿನ ನ್ಯಾಯಾಲಯ ವಜಾ ಮಾಡಿದೆ.
ಜಾಮೀನಿಗಾಗಿ ಹೊಸ ಅರ್ಜಿ ಸಲ್ಲಿಸಿದ್ದ ನೀರವ್ ಮೋದಿ ಭದ್ರತಾ ಠೇವಣಿಗಾಗಿ 18. 28 ಕೋಟಿ ರೂ. ಬದಲಾಗಿ 36.57 ಕೋಟಿ ರೂ. ಇರಿಸುತ್ತೇನೆ. ನನ್ನನ್ನು ಗೃಹ ಬಂಧನದಲ್ಲಿ ಇಡುವಂತೆ ಆದೇಶಿಸಿ ಎಂದು ಮನವಿ ಮಾಡಿದ್ದ. ಆದರೆ ಕೋರ್ಟ್ ನಾಲ್ಕನೇ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಆದ್ದರಿಂದ ನೀರವ್ ಮೋದಿ ನನ್ನನ್ನು ಭಾರತಕ್ಕೆ ಹಸ್ತಾಂತರಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ. ಈಗ ಈ ಪ್ರಕರಣದ ವಿಚಾರಣೆಯಲ್ಲಿ ಯುಕೆ ನ್ಯಾಯಾಲಯ ಡಿಸೆಂಬರ್ 4ಕ್ಕೆ ಮುಂದೂಡಿದೆ.
ಪಿಎನ್ಬಿ ಬ್ಯಾಂಕ್ ನಲ್ಲಿ ಸಾಲ ಪಡೆದು ವಂಚಿಸಿರುವ ಪ್ರಕರಣದಲ್ಲಿ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಮುಖ್ಯ ಆರೋಪಿಗಳಾಗಿದ್ದು ಈ ಹಗರಣ ಬೆಳಕಿಗೆ ಬರುವ ಮುನ್ನವೇ ಇವರಿಬ್ಬರು ಕಳೆದ ಜನವರಿಯಲ್ಲಿ ಭಾರತ ಬಿಟ್ಟು ಓಡಿಹೋಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಲವತ್ತೆಂಟು ವರ್ಷದ ನೀರವ್ ಮೋದಿಯನ್ನು ಮಾರ್ಚ್ 19 ರಂದು ಸ್ಕಾಟ್ಲೆಂಡ್ ಯಾರ್ಡ್ ಪೊಲೀಸ್ ಬಂಧಿಸಿ, ಪ್ರಸ್ತುತ ಆತನನ್ನು ಲಂಡನ್ನ ವಾಂಡ್ಸ್ವರ್ತ್ ಜೈಲಿನಲ್ಲಿ ಇರಿಸಲಾಗಿದೆ.
ಆರ್ಥಿಕ ಅಪರಾಧಗಳನ್ನು ಮಾಡಿದ ಆರೋಪದ ಮೇಲೆ ನೀರವ್ ಮೋದಿ ಕಾನೂನನ್ನು ಎದುರಿಸಲು ಭಾರತ ಅವನನ್ನು ಯುಕೆಯಿಂದ ಹಸ್ತಾಂತರ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ.