– 56 ದಿನಗಳಲ್ಲಿ 2.62 ಕೋಟಿ ಸಂಗ್ರಹ
ಚಾಮರಾಜನಗರ: ಕೊರೊನಾ ಕಾಲದಲ್ಲೂ ನಾಡಿನ ಪ್ರಮುಖ ದೇವಾಲಯಗಳಲ್ಲಿ ಒಂದಾದ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ದೇವಾಲಯಕ್ಕೆ ಕೋಟಿ ಕೋಟಿ ಹಣ ಹರಿದು ಬಂದಿದ್ದು, ಬರೋಬ್ಬರಿ 2.62 ಕೋಟಿ ರೂ. ಸಂಗ್ರಹವಾಗಿದೆ.
ದೇವಸ್ಥಾನದ ಹುಂಡಿ ಎಣಿಕೆ ಕಾರ್ಯವು ಗುರುವಾರ ಬೆಳಗ್ಗೆ 7.30ರಿಂದ ರಾತ್ರಿ 11.30ರ ವರೆಗು ನಡೆದಿದ್ದು, ದೇವಾಲಯ ತೆರೆದಿದ್ದ ಒಟ್ಟು 56 ದಿನಗಳಲ್ಲಿ 2,62,76,718 ರೂ. ಸಂಗ್ರಹವಾಗಿದೆ. 170 ಗ್ರಾಂ ಚಿನ್ನ, 3.7 ಕೆಜಿ ಬೆಳ್ಳಿಯನ್ನು ಕಾಣಿಕೆ ರೂಪದಲ್ಲಿ ಭಕ್ತರು ಮಾದಪ್ಪನಿಗೆ ಅರ್ಪಿಸಿದ್ದಾರೆ. ಇದನ್ನೂ ಓದಿ: ಕೆಆರ್ಪೇಟೆಯಲ್ಲಿ ಮಳೆ ಅವಾಂತರ – KSRTC ಬಸ್ ನಿಲ್ದಾಣ ಸಂಪೂರ್ಣ ಜಲಾವೃತ
ಯಾವುದೇ ಸೇವೆಗೆ, ರಥೋತ್ಸವಕ್ಕೆ ಅವಕಾಶ ಇಲ್ಲದಾಗಿಯೂ ಭಕ್ತರು ದೇವರ ದರ್ಶನ ಮಾತ್ರ ಪಡೆದು ಕಾಣಿಕೆ ರೂಪದಲ್ಲಿ ಹಣದ ಹೊಳೆಯನ್ನೇ ಹರಿಸಿದ್ದಾರೆ. ಕೊರೊನಾ ಹಿನ್ನೆಲೆ ವಿವಿಧ ಸೇವೆ ಹಾಗೂ ರಥೋತ್ಸವಗಳನ್ನು ರದ್ದುಪಡಿಸಲಾಗಿತ್ತು. ಆದರೂ ಭಾರೀ ಪ್ರಮಾಣದಲ್ಲಿ ಕಾಣಿಕೆ ಸಂಗ್ರಹವಾಗಿದೆ.