ಲಕ್ನೋ: ಬಾಯ್ ಫ್ರೆಂಡ್ ಸಹಾಯದಿಂದ 19 ವರ್ಷದ ಯುವತಿ, ತಾನೇ ಕಿಡ್ನಾಪ್ ಮಾಡಿಕೊಂಡು ಮನೆಯವರ ಬಳಿ 1 ಕೋಟಿ ರೂ.ಗಳಿಗೆ ಬೇಡಿಕೆ ಇಟ್ಟಿರುವ ಅಚ್ಚರಿಯ ಘಟನೆ ನಡೆದ ಬೆನ್ನಲ್ಲೇ ಇದೀಗ ಮತ್ತೊಂದು ಆಘಾತಕಾರಿ ಘಟನೆ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.
ಹೌದು. 14 ವರ್ಷದ ಬಾಲಕನನ್ನು ದುಷ್ಕರ್ಮಿಗಳು ಅಪಹರಿಸಿ 1 ಕೋಟಿ ಬೇಡಿಯಿಟ್ಟು ಬಳಿಕ ಬರ್ಬರವಾಗಿ ಕೊಲೆಗೈದಿದ್ದಾರೆ. ಈ ಘಟನೆ ಉತ್ತರಪ್ರದೇಶದ ಗೊರಕ್ಪುರ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ. 6ನೇ ತರಗತಿ ಬಾಲಕನ ಮೃತದೇಹವನ್ನು ಇಂದು ಸಂಜೆ ಗೊರಕ್ಪುರದಲ್ಲಿರುವ ಕಾಲುವೆಯಿಂದ ಹೊರ ತೆಗೆಯಲಾಗಿದೆ.
ಕಿರಾಣಿ ಹಾಗೂ ಪಾನ್ ಮಸಾಲ ಅಂಗಡಿ ಮಾಲೀಕರ 14 ವರ್ಷದ ಬಾಲಕನನ್ನು ಪ್ರಿಪ್ರೈಚ್ ಪ್ರದೇಶದಿಂದ ದುಷ್ಕರ್ಮಿಗಳು ಭಾನುವಾರ ಮಧ್ಯಾಹ್ನದ ವೇಳೆ ಅಪಹರಿಸಿದ್ದಾರೆ. ಆ ನಂತರ ಒಂದು ಲಕ್ಷ ಹಣ ನೀಡುವಂತೆ ಬಾಲಕನ ಪೋಷಕರಿಗೆ ಕರೆ ಬಂದಿದೆ.
ಮಧ್ಯಾಹ್ನ ಊಟ ಆದ ಬಳಿಕ ಮಗ ಮನೆಯ ಹೊರಗಡೆಯೇ ಆಟವಾಡುತ್ತಿದ್ದನು. ಸಂಜೆ ಅಪರಿಚಿತ ನಂಬರಿಂದ ನನ್ನ ಮೊಬೈಲ್ ಗೆ ಕರೆಯೊಂದು ಬಂದಿದೆ. ಕರೆ ಮಾಡಿದ ವ್ಯಕ್ತಿ, ಈ ಕೂಡಲೇ ನನಗೆ 1 ಕೋಟಿ ಹಣ ನೀಡಿ ನಿಮ್ಮ ಮಗನನ್ನು ಬಿಡಿಸಿಕೊಂಡು ಹೋಗು ಎಂದು ಹೇಳಿದ. ಕೂಡಲೇ ನಾನು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದೆ ಎಂದು ಬಾಲಕನ ತಂದೆ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಮಾಹಿತಿ ಸಿಕ್ಕ ಕೂಡಲೇ ಪೊಲೀಸರ ತಂಡ ಕ್ರಮ ಕೈಗೊಂಡು ಅಪಹರಣಕಾರರ ಹುಡುಕಾಟ ಆರಂಭಿಸಿದ್ದು, ಭಾನುವಾರ ರಾತ್ರಿಯೇ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಗೊರಖ್ ಪುರ್ ಎಸ್ಎಸ್ಪಿ ಸುನಿಲ್ ಕುಮಾರ್ ಗುಪ್ತಾ ಹೇಳಿದ್ದಾರೆ. ಇದನ್ನೂ ಓದಿ: ಅಪ್ಪ 1 ಕೋಟಿ ಕೊಡಿ- ಕಿಡ್ನ್ಯಾಪ್ ನಾಟಕವಾಡಿದ ಯುವತಿ
ತನಿಖೆಯ ವೇಳೆ ಅಪಹರಣಕಾರರು ಬಾಲಕನನ್ನು ಕಿಡ್ನಾಪ್ ಮಾಡಿದ ಕೂಡಲೆ ಕೊಲೆ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾರೆ. ಆ ಬಳಿಕ ಕೊಲೆ ಮಾಡಿದ ಸ್ಥಳಕ್ಕೆ ಆರೋಪಿಗಳನ್ನು ಕರೆದೊಯ್ದು ಬಾಲಕನ ಮೃತದೇಹವನ್ನು ಹೊರತೆಗೆಯಲಾಯಿತು ಎಂದು ಎಸ್ಎಸ್ಪಿ ವಿವರಿಸಿದ್ದಾರೆ.
ನಿನ್ನೆ ಸಂಜೆ ಬಾಲಕನ ತಂದೆ ಕರೆ ಮಾಡಿ ಮಗ ನಾಪತ್ತೆಯಾಗಿದ್ದು, ಅಪರಿಚಿತ ನಂಬರಿಂದ ಕರೆ ಬಂದಿರುವ ಬಗ್ಗೆ ಹೇಳಿದ್ದಾರೆ. ಕೂಡಲೇ ಕ್ರೈಂ ಬ್ರ್ಯಾಂಚ್ ಹಾಗೂ ಎಸ್ಟಿಎಫ್ ಸೇರಿದಂತೆ ಹಲವು ಪೊಲೀಸರ ತಂಡ ಬಾಲಕನ ಪತ್ತೆಗೆ ಹುಡುಕಾಟ ಆರಂಭಿಸಿತ್ತು ಎಂದು ಅವರು ತಿಳಿಸಿದರು.