ಯಾದಗಿರಿ: ಮಹಾರಾಷ್ಟ್ರ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ ಆಗ್ತಿದ್ದು, ಉತ್ತರ ಕರ್ನಾಟಕದ ಕೃಷ್ಣಾನದಿ ತಟದ ಜಿಲ್ಲೆಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಯಾದಗಿರಿ ಜಿಲ್ಲೆಯ ಬಸವಸಾಗರ ಡ್ಯಾಮ್ಗೆ ನಿತ್ಯ 1 ಲಕ್ಷ ಕ್ಯೂಸೆಕ್ ನೀರು ಒಳಹರಿವು ಬರುತ್ತಿದೆ. ಹೀಗಾಗಿ ನಿನ್ನೆ ಒಂದೇ ದಿನ ಡ್ಯಾಂನಿಂದ ಒಂದೂವರೆ ಲಕ್ಷ ಕ್ಯೂಸೆಕ್ ನೀರು ಹೊರಬಿಡಲಾಗಿದೆ. ಇನ್ನೂ ಹೆಚ್ಚಿನ ನೀರು ಬಿಡುವ ಸಾಧ್ಯತೆಯಿದೆ. ಹೀಗಾಗಿ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಾರಾಯಣಪುರ ಜಲಾಶಯ ಹಾಗೂ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.
ನದಿ ಪಾತ್ರಕ್ಕೆ ತೆರಳದಂತೆ ಗ್ರಾಮಸ್ಥರಿಗೆ ಡಂಗೂರದ ಮೂಲಕ ಎಚ್ಚರಿಕೆ ನೀಡಲಾಗಿದೆ. ಈಗಾಗಲೇ ಭೀಮಾನದಿ ತೀರದ ಕಂಗಳೇಶ್ವರ ಹಾಗೂ ವೀರಾಂಜನೇಯ ದೇವಸ್ಥಾನಕ್ಕೆ ಜಲದಿಗ್ಬಂಧನವಾಗಿದೆ. ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಭಾರೀ ಪ್ರಮಾಣದ ನೀರು ಬಿಟ್ಟ ಹಿನ್ನೆಲೆ ಬಸವೇಶ್ವರ ದೇವಾಲಯ ಜಲಾವೃತವಾಗಿದೆ. ಇದನ್ನೂ ಓದಿ: ಶಾರ್ಟ್ಕಟ್ ರಾಜಕೀಯದ ಮೂಲಕ ಮತಗಳನ್ನು ಸೆಳೆಯುವುದು ತುಂಬಾ ಸುಲಭ: ಪ್ರಧಾನಿ ಮೋದಿ
ಇದೇ ರೀತಿ ಡ್ಯಾಂನಿಂದ ನೀರು ಬಿಟ್ಟರೆ ಸುರಪುರ, ಶಹಾಪುರ ಹಾಗು ವಡಗೇರಾದ ಸುಮಾರು 45 ಗ್ರಾಮಗಳು ಬಹುತೇಕ ಜಲಾವೃತವಾಗಲಿದೆ. ಜೊತೆಗೆ ಕೊಳ್ಳುರ ಬ್ರಿಡ್ಜ್ ಸಂಪೂರ್ಣ ಮುಳುಗಡೆಯಾಗಿ ಯಾದಗಿರಿ-ರಾಯಚೂರು ಜಿಲ್ಲೆಯ ಸಂಪರ್ಕ ಸಹ ಕಡಿತವಾಗಲಿದೆ.