ಬೆಂಗಳೂರು: ಮಠಮಾನ್ಯಗಳಿಂದ ಸಿಎಂ ಬಿಎಸ್ವೈಗೆ ನಿರೀಕ್ಷೆಗೂ ಮೀರಿದ ಬೆಂಬಲ ವ್ಯಕ್ತವಾಗುತ್ತಿರುವುದು ಹೈಕಮಾಂಡ್ ಹಾದಿಯನ್ನು ಕಠಿಣಗೊಳಿಸಿದಂತಿದೆ.
ಬೇರೆ ರಾಜ್ಯಗಳಲ್ಲಿ ಜಾತಿ ನೋಡದೇ ನಾಯಕತ್ವ ಬದಲಾವಣೆ ಮಾಡಿದಂತೆ ಕರ್ನಾಟಕದಲ್ಲಿ ಮಾಡುವುದು ಕಷ್ಟ ಸಾಧ್ಯ ಎಂಬ ವಿಶ್ಲೇಷಣೆ ನಡೆದಿವೆ. ಇದಕ್ಕೆ ಕಾರಣ ರಾಜ್ಯದ ರಾಜಕೀಯ ಇತಿಹಾಸ.
ಬಿಎಸ್ವೈಗೆ ಉತ್ತರಾಧಿಕಾರಿಯನ್ನಾಗಿ ವೀರಶೈವ ಲಿಂಗಾಯತರನ್ನೇ ಆರಿಸಬೇಕಾದ ಒತ್ತಡಕ್ಕೆ ಹೈಕಮಾಂಡ್ ಸಿಲುಕಿದೆ. ಹೀಗಾಗಿ ಅಳೆದುತೂಗಿ ಹೆಜ್ಜೆ ಇಡಲು ಮೋದಿ-ಶಾ ಟೀಮ್ ನಿರ್ಧರಿಸಿದೆ. ಈಗಾಗಲೇ ಲಿಂಗಾಯತ ಸಮುದಾಯದ ನಾಯಕತ್ವ ಏಕೆ ಅಷ್ಟೊಂದು ಮುಖ್ಯ ಎಂಬ ಬಗ್ಗೆ ವರದಿ ತರಿಸಿಕೊಂಡಿದೆ ಎನ್ನಲಾಗುತ್ತಿದೆ.
ಜಾತಿ ಚೌಕಟ್ಟು ಮೀರುತ್ತಾ ಬಿಜೆಪಿ ಹೈಕಮಾಂಡ್?
12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಲಿಂಗಾಯತ ಸಮುದಾಯದ ಪ್ರಾಬಲ್ಯವಿದ್ದು, ಸುಮಾರು 120 ಅಸೆಂಬ್ಲಿ ಕ್ಷೇತ್ರಗಳಲ್ಲಿ ಲಿಂಗಾಯತರ ಪ್ರಭಾವವಿದೆ.
ಸದ್ಯ ವಿಧಾನಸಭೆಯಲ್ಲಿ 60 ಮಂದಿ(ಬಿಜೆಪಿ 38, ಕಾಂಗ್ರೆಸ್ 18, ಜೆಡಿಎಸ್ 4) ಲಿಂಗಾಯತ ಶಾಸಕರಿದ್ದಾರೆ. 1990ರಲ್ಲಿ ರಾಜ್ಯದಲ್ಲಿದ್ದ ಲಿಂಗಾಯತರ ಪ್ರಮಾಣ ಶೇ.18.42. ಈಗ ಇದು ಕಡಿಮೆಯಾಗಿದೆ ಎನ್ನಲಾಗುತ್ತಿದೆ.
ರಾಜ್ಯದ 22 ಸಿಎಂಗಳ ಪೈಕಿ 8 ಸಿಎಂಗಳು ಲಿಂಗಾಯತರಾಗಿದ್ದಾರೆ. ನಿಜಲಿಂಗಪ್ಪ, ಬಿ.ಡಿ.ಜತ್ತಿ, ಎಸ್.ಆರ್.ಕಂಠಿ, ವೀರೇಂದ್ರಪಾಟೀಲ್, ಎಸ್.ಆರ್.ಬೊಮ್ಮಾಯಿ, ಜೆ.ಹೆಚ್.ಪಟೇಲ್, ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದಾರೆ.
ವೀರೇಂದ್ರ ಪಾಟೀಲರನ್ನು ಏಕಾಏಕಿ ಕೈಬಿಟ್ಟ ಕ್ಷಣದಿಂದ ಕಾಂಗ್ರೆಸ್ನಿಂದ ಸಮುದಾಯ ದೂರವಾಗಿತ್ತು. ಕಳೆದ 2 ದಶಕಗಳಿಂದ ಬಿಜೆಪಿ ಜೊತೆಯಲ್ಲೇ ಗಟ್ಟಿಯಾಗಿ ಲಿಂಗಾಯತ ಸಮುದಾಯ ನಿಂತಿದೆ. ಇದನ್ನೂ ಓದಿ : ಜು.26 ರಂದು ಸಿಎಂ ನಿರ್ಗಮನ – ಷರತ್ತು ವಿಧಿಸಿದ ಹೈಕಮಾಂಡ್
ಸಿದ್ದರಾಮಯ್ಯ ಸರ್ಕಾರ ಲಿಂಗಾಯತ ಪ್ರತ್ಯೇಕ ಧರ್ಮ ಮಾಡಲು ಹೋಗಿದ್ದು ತನಗೆ ಲೋಕಸಭಾ ಚುನಾವಣೆಯಲ್ಲಿ ವರವಾಗಿದೆ ಎಂದು ಬಿಜೆಪಿ ಹೇಳಿಕೊಂಡಿತ್ತು. ಈ ಕಾರಣಕ್ಕಾಗಿಯೇ ಬಹಳ ಎಚ್ಚರಿಕೆ ಹೆಜ್ಜೆ ಇಡಲು ಬಿಜೆಪಿ ಹೈಕಮಾಂಡ್ ತೀರ್ಮಾನ ತೆಗೆದುಕೊಂಡಿದೆ.