ಚಾಮರಾಜನಗರ: ಸೋದರನ ಅಂತ್ಯಕ್ರಿಯೆಗೆ ತೆರಳಲಾಗದೇ ಮಹಿಳೆ ಕಣ್ಣೀರು ಹಾಕಿರುವ ಮನಕಲಕುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಮಹಿಳೆಯ ತಮ್ಮ ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಮೃತಪಟ್ಟಿದ್ದರು. ಇಂದು ಸಾರಿಗೆ ವಾಹನಗಳ ಸಂಚಾರ ಸುದ್ದಿ ತಿಳಿದು ಚಾಮರಾಜನಗರದ ಬಸ್ ನಿಲ್ದಾಣಕ್ಕೆ ಆಗಮಿಸಿದ್ದರು. ಆದ್ರೆ ಚಾಮರಾಜನಗರದಿಂದ ಬೇರೆ ಜಿಲ್ಲೆಗಳಿಗೆ ಬಸ್ ಸಂಚರಿಸಲಿ ಜಿಲ್ಲಾಧಿಕಾರಿಗಳು ಅನುಮತಿ ನೀಡಿಲ್ಲ. ಹಾಗಾಗಿ ಬಸ್ ಗಳು ಜಿಲ್ಲೆಯೊಳಗಡೆ ಮಾತ್ರ ಸಂಚರಿಸುತ್ತಿವೆ. ಅಂತರ್ ಜಿಲ್ಲೆಗೆ ಬಸ್ ಸಂಚಾರವಿಲ್ಲ ಎಂಬ ವಿಷಯ ತಿಳಿದ ಮಹಿಳೆ, ಬೇಕಾದ್ರೆ ತಮ್ಮ ಸಾವನ್ನಪ್ಪಿರೋ ಬಗ್ಗೆ ಫೋಟೋ ತರಿಸುತ್ತೇನೆ. ಪ್ರಯಾಣಕ್ಕೆ ಅವಕಾಶ ನೀಡಬೇಕೆಂದು ಕಣ್ಣೀರು ಹಾಕಿದರು. ಕೊನೆಗೆ ಬಸ್ ಆರಂಭವಾಗದ ಹಿನ್ನೆಲೆಯಲ್ಲಿ ಕಣ್ಣೀರು ಹಾಕುತ್ತಾ ವಾಪಸ್ ಹೋಗುವಂತಾಯ್ತು.
ಅಂತರ್ ಜಿಲ್ಲಾ ಪ್ರಯಾಣಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದರೂ, ಜಿಲ್ಲಾಡಳಿತ ಈ ಕುರಿತು ಯಾವುದೇ ಆದೇಶ ಹೊರಡಿಸಿಲ್ಲ. ವಿಷಯ ತಿಳಿಯದೇ ಇಂದು ಬೆಳಗ್ಗೆ ಚಾಮರಾಜನಗರದ ಬಸ್ ನಿಲ್ದಾಣಕ್ಕೆ ನೂರಾರು ಜನ ಆಗಮಿಸಿ, ಗಂಟೆಗಟ್ಟಲೇ ಕಾದು ನಿರಾಶರಾಗಿ ವಾಪಸ್ ತೆರಳಿದರು.