ಚಿಕ್ಕಬಳ್ಳಾಪುರ: ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ರಾಜ್ಯದಲ್ಲೇ ಅತ್ಯಂತ ಬುದ್ಧಿವಂತ ರಾಜಕಾರಣಿ ಅಂತ ಚಿಕ್ಕಬಳ್ಳಾಪುರದಲ್ಲಿ ಸಹಕಾರ ಸಚಿವ ಸೋಮಶೇಖರ್ ಹೇಳಿದ್ದಾರೆ.
ಸಹಕಾರ ಇಲಾಖೆ ಬಿಟ್ಟು ಬೇರೆ ಖಾತೆ ಪಡೆಯೋಣ ಅಂತಿದ್ದೆ, ಆದ್ರೆ ಸಿಎಂ ಬಳಿ ನನಗೆ ಅದೇ ಖಾತೆ ಕೊಡಿಸಿ, ತಮ್ಮ ಜಿಲ್ಲೆಗೆ ಬೇಕಾದ ಕೆಲಸಗಳನ್ನ ನನ್ನಿಂದ ಮಾಡಿಸಿಕೊಳ್ಳೋದು ಅವರ ಬುದ್ಧಿವಂತಿಕೆ ಅಂತ ಹೇಳಿದರು. ಇನ್ನೂ ಸಿಎಂ ಯಡಿಯೂರಪ್ಪನವರ ಬಳಿ ಯಾರೂ ಸಹ ಧೈರ್ಯವಾಗಿ ಮಾತನಾಡಲ್ಲ, ಮಾತನಾಡೋಕೆ ಹಿಂಜರಿತಾರೆ. ಕಾರಣ ಯಡಿಯೂರಪ್ಪನವರಿಗೆ ಕೋಪ ಅಂತ. ಆದರೆ ಸುಧಾಕರ್ ಏನೋ ಮೋಡಿ ಮಾಡಿದ್ದಾರೋ ಗೊತ್ತಿಲ್ಲ. ಅವರು ಮಾತ್ರ ಯಡಿಯೂರಪ್ಪನವರ ಬಳಿ ಧೈರ್ಯವಾಗಿ ಮಾತನಾಡ್ತಾರೆ. ಹಾಗೆ ಕೋವಿಡ್ ವಿಚಾರದಲ್ಲೂ ಸಹ ಸಚಿವರು ಉತ್ತಮ ಕೆಲಸ ಮಾಡುತ್ತಿದ್ದಾರೆ ಅಂತಾ ಹಾಡಿ ಹೊಗಳಿದರು.
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಹಕಾರ ಸಚಿವರು, ವೈದ್ಯಕೀಯ ಶಿಕ್ಷಣ ಸಚಿವರನ್ನ ಹಾಡಿ ಹೊಗಳಿದರು. ಇದೇ ವೇಳೆ ಕೋಲಾರ ಡಿಸಿಸಿ ಬ್ಯಾಂಕುಗಳು ಅಕ್ರಮಗಳ ಕೂಟವಾಗಿದ್ದು ತನಿಖೆ ನಡೆಸಲಾಗುವುದು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪದಗ್ರಹಣ ಕಾರ್ಯಕ್ರಮಕ್ಕೆ ಸರ್ಕಾರ ಅನುಮತಿ ನೀಡಿಲ್ಲ ಅನ್ನೋ ಪ್ರಶ್ನೆಗೆ ಪ್ರತಿಕ್ರಿಯಿಸಿ, ದೇಶದಲ್ಲಿ ಡಿಕೆಶಿ ಏನಾದ್ರೂ ಸ್ಪೆಷಲ್? ಮಂತ್ರಿಗಳಾಗಿ ನಾವೇ ಐನೂರು ಜನ ಸೇರಿಸಿ ಕಾರ್ಯಕ್ರಮ ಮಾಡೋಕೆ ಆಗಿಲಿಲ್ಲ. ಬೇಕಾದ್ರೆ ಕೋವಿಡ್ ಸೋಂಕಿನ ಭೀತಿ ಮುಗಿದ ನಂತರ ಮಾಡಿಕೊಳ್ಳಲಿ ಯಾರು ಬೇಡ ಅಂತಾರೆ ಅಂದರು.
ಮತ್ತೊಂದೆಡೆ ನಮ್ಮ ಜೊತೆ ಇರೋವರಿಗೆ ಎಂಎಲ್ಸಿ ಸ್ಥಾನ ನೀಡುವಂತೆ ಸಿಎಂ ಬಳಿ ಮನವಿ ಮಾಡಿದ್ದೇವೆ. ಮುನಿರತ್ನಂ ಹಾಗೂ ಪ್ರತಾಪ್ ಗೌಡರದ್ದು ನ್ಯಾಯಾಲಯದಲ್ಲಿ ಕ್ಲಿಯರ್ ಆಗಿದ ನಂತರ ಚುನಾವಣೆ ಎದುರಿಸಬೇಕಾಗುತ್ತೆ. ಆರ್ ಶಂಕರ್ ಹಾಗೂ ರೋಷನ್ ಬೇಗ್ ಗೂ ಸಹ ಎಂಎಲ್ಸಿ ಮಾಡುವಂತೆ ಮನವಿ ಮಾಡಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಕೊಟ್ಟ ಮಾತನ್ನ ಈಡೇರಿಸುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.