ಬೆಂಗಳೂರು: ನಟಿ ಆಶಿಕಾ ರಂಗನಾಥ್ ಬೆನ್ನಲ್ಲೇ ನಟ ಕೋಮಲ್ ಸಹ ವೈದ್ಯರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.
ವೈದ್ಯರ ಮೇಲಿನ ಹಲ್ಲೆಗಳನ್ನು ಖಂಡಿಸಿ, ಇಂದು ರಾಷ್ಟ್ರೀಯ ಪ್ರತಿಭಟನಾ ದಿನವನ್ನು ನಡೆಸಲಾಗುತ್ತಿದೆ. ಡಾಕ್ಟರ್ಗಳ ಪ್ರೋಟೆಸ್ಟ್ ಗೆ ಈಗಾಗಲೇ ಸಾಕಷ್ಟು ಬೆಂಬಲ ವ್ಯಕ್ತವಾಗಿದೆ. ಇದೀಗ ನಟ ಕೋಮಲ್ ಸಹ ವೈದ್ಯರಿಗೆ ಸಾಥ್ ಕೊಟ್ಟಿದ್ದಾರೆ.
ಈ ಬಗ್ಗೆ ಮಾತನಾಡಿದ ನಟ ಕೋಮಲ್, ಈ ವೀಡಿಯೋ ಮಾಡಲು ತುಂಬಾ ದೊಡ್ಡ ಕಾರಣ ಇದೆ, ಕಾರಣ ಅನ್ನುವುದಕ್ಕಿಂತ ವೈದ್ಯರ ಪ್ರತಿಭಟನೆ ದಿನವನ್ನು ಬೆಂಬಲಿಸಬೇಕಾದ ಕರ್ತವ್ಯವಿದೆ. ಕೋವಿಡ್ ಮಹಾಮಾರಿಯ ವಿರುದ್ಧ ಡಾಕ್ಟರ್ಸ್ ಹೊರಾಡುತ್ತಿದ್ದಾರೆ. ಆದರೆ ಹಣೆಬರಹ ಸರಿಯಿಲ್ಲದ ಸಮಯದಲ್ಲಿ ಎಷ್ಟೋ ಜನ ರೋಗಿಗಳು ಸಾವನ್ನಪ್ಪುತ್ತಾರೆ. ಹಾಗಂತ ಎಲ್ಲಾ ಸಾವಿಗೂ ಡಾಕ್ಟರ್ಸ್ ಕಾರಣ ಆಗುವುದಿಲ್ಲ, ಅವರ ಮೇಲೆ ಹಲ್ಲೆ ನಡೆಯುತ್ತಿದೆ. ಎಲ್ಲರಿಗೂ ಗೊತ್ತಿರುವ ಹಾಗೇ ನಾನು ಮತ್ತೆ ಹೇಳುತ್ತೇನೆ, ವೈದ್ಯೋ ನಾರಾಯಣ ಹರಿ ಅಂದರೆ ವೈದ್ಯರನ್ನು ನಾರಾಯಣನಿಗೆ ನಮ್ಮ ಸಂಸ್ಕೃತಿಯಲ್ಲಿ ಹೋಲಿಸಲಾಗುತ್ತದೆ. ಎಲ್ಲರಿಗೂ ನೋವಿರುತ್ತದೆ ನಮ್ಮ ಆಪ್ತರೊಬ್ಬರು ಸತ್ತಿದ್ದಾರೆ ಎಂದರೆ ಎಲ್ಲಾ ಸಂದರ್ಭದಲ್ಲೂ ಡಾಕ್ಟರ್ಸ್ ಕಾರಣವಾಗುವುದಿಲ್ಲ ಎಂದು ಹೇಳಿದ್ದಾರೆ.
ಟ್ರೀಟ್ಮೆಂಟ್ ಅವರಿಗೆ ಗೊತ್ತಿರುವ ಮಟ್ಟಿಗೆ ಮಾಡಿರುತ್ತಾರೆ. ಯಾರೂ ರೋಗಿ ಸಾಯಲಿ ಎಂದು ಬಯಸುವುದಿಲ್ಲ. ಹಾಗಾಗಿ ನನ್ನ ಕಳಕಳಿಯ ಪ್ರಾರ್ಥನೆ ಡಾಕ್ಟರ್ ಗಳನ್ನು ಬೆಂಬಲಿಸಿ. ವೈದ್ಯರು ಜೀವವನ್ನು ಉಳಿಸುವವರು. ಸಂಯಮ ಇರಲಿ ಬೆಂಬಲಿಸಿ, ಪ್ರೋತ್ಸಾಹಿಸಿ.
ತಮ್ಮ ಸ್ವಂತ ಅನುಭವವನ್ನು ಹಂಚಿಕೊಂಡ ನಟ, ವೈದ್ಯರು ದೇವರ ಸಮಾನವೆಂದು ಹೇಳುತ್ತೇನೆ ಉದಾಹರಣೆಗೆ ನನಗೆ ಕೋವಿಡ್ ಬಂದಿದ್ದನ್ನು ಗುಣಪಡಿಸಿದ್ದೆ ವೈದ್ಯರು. ಆದ್ದರಿಂದ ಕಳಕಳಿಯಿಂದ ಕೇಳುತ್ತೇನೆ ಹಲ್ಲೆ ಮಾಡಬೇಡಿ ಇದು ಅಪರಾಧ ಕೂಡ ಹೌದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಷ್ಟ್ರೀಯ ಪ್ರತಿಭಟನಾ ದಿನಕ್ಕೆ ಬೆಂಬಲ ಸೂಚಿಸಿದ ನಟಿ ಆಶಿಕಾ ರಂಗನಾಥ್