– ನಿತ್ಯವೂ ಗುಂಪು ಗುಂಪಾಗೇ ವ್ಯವಹರಿಸುವ ಜನ
ರಾಯಚೂರು: ನಗರದಲ್ಲಿ ಕೊರೊನಾ ಸೋಂಕು ದಿನೇ ದಿನೇ ಹೆಚ್ಚುತ್ತಿದ್ದರೂ ಜನ ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ನಗರದ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಪ್ರತೀದಿನ ಜನಜಂಗುಳಿ ಸೇರುತ್ತಿದೆ. ಸಾಮಾಜಿಕ ಅಂತರ ಕಾಪಾಡಿ, ಜನರನ್ನ ನಿಯಂತ್ರಿಸಲು ಇಲ್ಲಿನ ಅಧಿಕಾರಿಗಳು ಸಹ ವಿಫಲರಾಗಿದ್ದಾರೆ.
ಇಂದು ಸೋಮವಾರವಾಗಿದ್ದರಿಂದ ನೂರಾರು ಜನರು ಉಪನೋಂದಣಿ ಕಚೇರಿಯಲ್ಲಿ ಜಮಾವಣೆಯಾಗಿದ್ದರು. ಕಚೇರಿಯೊಳಗೆ ಸಾಮಾಜಿಕ ಅಂತರವಿಲ್ಲದೆ ಸೇರಿದ ಜನ ಕೊರೊನಾ ಭೀತಿಯನ್ನೇ ಮರೆತಿದ್ದಾರೆ. ಸಿಬ್ಬಂದಿಗಳ ಮುಂದೆಯೂ ವಿವಿಧ ಕೆಲಸಗಳಿಗಾಗಿ ಜನ ಮುಗಿಬೀಳುತ್ತಿದ್ದಾರೆ.
ಕಚೇರಿ ಒಳಗೆ ಬರುವವರಿಗೆ ಸ್ಯಾನಿಟೈಸರ್ ವ್ಯವಸ್ಥೆಯೂ ಇಲ್ಲಾ. ಹೀಗಿದ್ದರೂ ಜನ ಮಾತ್ರ ಯಾವ ಪರಿವೇ ಇಲ್ಲದೆ ಕಚೇರಿಯಲ್ಲಿ ಓಡಾಡುತ್ತಿದ್ದಾರೆ. ಮಾಸ್ಕ್ ಇಲ್ಲದೆ ಕಚೇರಿಯಲ್ಲಿ ವ್ಯವಹರಿಸುತ್ತಿರುವ ಜನರನ್ನ ನಿಯಂತ್ರಿಸಲು ಆಗದೆ ಅಸಹಾಯಕತೆ ವ್ಯಕ್ತಪಡಿಸುತ್ತಿರುವ ಉಪನೋಂದಣಿ ಕಚೇರಿಯ ಸಿಬ್ಬಂದಿ ಜನ ಹೆಚ್ಚಾದಾಗಲೆಲ್ಲಾ ಕೊನೆಗೆ ಜನರನ್ನೆಲ್ಲಾ ಹೊರಗೆ ಕಳುಹಿಸುತ್ತಿದ್ದಾರೆ.
ರಾಯಚೂರು ನಗರವೊಂದರಲ್ಲೇ ಕೊರೊನಾ ಸೋಂಕಿತರ ಸಂಖ್ಯೆ 800 ಗಡಿ ದಾಟಿದೆ. ಹೀಗಿದ್ದರೂ ಯಾವ ಮುನ್ನೆಚ್ಚರಿಕೆಗಳಿಲ್ಲದೆ ಜನ ಸರ್ಕಾರಿ ಕಚೇರಿಗಳಲ್ಲಿ ಗುಂಪು ಗುಂಪಾಗಿ ವ್ಯವಹರಿಸುತ್ತಿದ್ದಾರೆ.