ಮೈಸೂರು: ಜಿಲ್ಲೆಯಲ್ಲಿ ಕೆಲ ಹಾವುಗಳಿವೆ. ಅಂತಹ ಹಾವುಗಳಿಂದ ಹುಷಾರಾಗಿರಬೇಕು ಎಂದು ಮೈಸೂರು ಹಾಲು ಒಕ್ಕೂಟ ನಿ.(ಮೈಮುಲ್)ದ ಕುರಿತು ಶಾಸಕ ಸಾ.ರಾ.ಮಹೇಶ್ ವ್ಯಂಗ್ಯವಾಗಿ ಮಾತನಾಡಿದ್ದಾರೆ.
ನಗರದಲ್ಲಿ ಈ ಕುರಿತು ಮಾತನಾಡಿದ ಅವರು, ಮೈಸೂರಿನಲ್ಲಿ ಕೆಲ ಹಾವುಗಳಿವೆ ಅವುಗಳಿಂದ ಹುಷಾರಾಗಿ ಇರಬೇಕು. ಕೆಲವು ಕಚ್ಚಿದ್ರೆ ವಿಷ, ಇನ್ನೂ ಕೆಲವು ಮೂಸಿದರೆ ವಿಷ ಇದೆ. ಅಂತಹ ಹಾವುಗಳಿಂದ ಹುಷಾರಾಗಿ ಇರಬೇಕು. ಚಾಮರಾಜನಗರ ಹಾಲು ಒಕ್ಕೂಟದ ಬಗ್ಗೆ ಜಂಟಿ ಸಮಿತಿ ವರದಿ ನೀಡಿದ್ದು, ಅಲ್ಲಿನ ಆಡಳಿತ ಮಂಡಳಿಯನ್ನು ಅಮಾನತು ಮಾಡಿ ಎಂದು ಹೇಳಿದೆ. ಅಲ್ಲಿನ ನೇಮಕಾತಿ ಪ್ರಕ್ರಿಯೆ ಪಾರದರ್ಶಕವಾಗಿ ಇರಲಿಲ್ಲ ಎಂದೂ ಹೇಳಿದೆ. ಅಲ್ಲಿ ಪರೀಕ್ಷೆ ನಡೆಸಿದ ಸಂಸ್ಥೆಯೇ ಮೈಮುಲ್ನಲ್ಲಿ ಪರೀಕ್ಷೆ ನಡೆಸಿದೆ. ಅಲ್ಲಿ ಅಕ್ರಮ ಮಾಡಿರುವ ಸಂಸ್ಥೆಯನ್ನು ಇಲ್ಲಿ ಒಪ್ಪಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
ನಮಗೆ ನ್ಯಾಯ ಸಿಗುವ ಭರವಸೆ ಇದೆ. ಅದಕ್ಕಾಗಿ ಹೋರಾಟ ಮಾಡ್ತಿದ್ದೇನೆ. ಆದರೆ ಕೆಲ ಹಾವುಗಳು ಮೈಸೂರಿನಲ್ಲಿ ಇವೆ. ಅಂತಹ ಹಾವುಗಳಿಂದ ಹುಷಾರಾಗಿ ಇರಬೇಕು ಎಂದು ವ್ಯಂಗ್ಯವಾಡಿದ್ದಾರೆ.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸುವ ಕುರಿತು ಮಾತನಾಡಿದ ಅವರು, ದೇವೇಗೌಡರು ರಾಜ್ಯಸಭೆಗೆ ಸ್ಪರ್ಧಿಸುವಂತೆ ನಾವೆಲ್ಲ ಒತ್ತಾಯಿಸಿದ್ದೇವೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಮಂಗಳವಾರ ನಾಮಪತ್ರ ಸಲ್ಲಿಸಲು ಕೊನೆಯ ದಿನ. ನಾಳೆಯೂ ದೇವೇಗೌಡರನ್ನು ಮನವೊಲಿಸುತ್ತೇವೆ. ಒಪ್ಪಲಿಲ್ಲ ಎಂದರೆ ಮಂಗಳವಾರ ಎಲ್ಲ ಜೆಡಿಎಸ್ ಶಾಸಕರು ಹೆಚ್ಡಿಡಿ ಮನೆಗೆ ಭೇಟಿ ನೀಡಿ ಒಪ್ಪುವಂತೆ ಮಾಡುತ್ತೇವೆ. ದೇವೇಗೌಡರು ಒಪ್ಪಿದರೆ ಬಾಕಿ ಬೇಕಾಗಿರುವ ಮತಗಳಿಗೆ ಯಾರ ಬಳಿ ಹೋಗಬೇಕು ಎಂದು ಚರ್ಚೆ ಮಾಡುತ್ತೇವೆ ಎಂದರು.