ಬೆಳಗಾವಿ/ಚಿಕ್ಕೋಡಿ: ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದೇ ಬರುತ್ತೆ ಎಂದು ಕಾಂಗ್ರೆಸ್ ಪಕ್ಷದ ನೂತನ ಕಾರ್ಯಾಧ್ಯಕ್ಷ ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು.
ಕಾಂಗ್ರೆಸ್ ಪಕ್ಷದ ನೂತನ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾದ ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ ಮೊದಲ ಬಾರಿಗೆ ಶೈಕ್ಷಣಿಕ ಜಿಲ್ಲೆ ಚಿಕ್ಕೋಡಿಗೆ ಆಗಮಿಸಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನೂತನ ಕಾರ್ಯದ್ಯಕ್ಷರನ್ನ ಅದ್ಧೂರಿಯಾಗಿ ಸ್ವಾಗತಿಸಿದರು. ಚಿಕ್ಕೋಡಿ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಕೆಪಿಸಿಸಿ ಕಾರ್ಯದ್ಯಕ್ಷ ಸತೀಶ್ ಜಾರಕಿಹೊಳಿ ಆಗಮಿಸುತ್ತಿದ್ದಂತೆ ಕಾರ್ಯಕರ್ತರು ಪಟಾಕಿ ಸಿಡಿಸಿ ಹೂ ನೀಡಿ ಸ್ವಾಗತ ಮಾಡಿಕೊಂಡರು.
ಡಿ.ಕೆ.ಶಿವಕುಮಾರ್ ಜೈಲಿಗೆ ಹೋಗಿ ಬಂದವರು. ಅವರಿಂದ ಹೇಗೆ ಪಕ್ಷ ಕಟ್ಟಲಾಗುತ್ತದೆ ಎಂದು ಸಚಿವ ರಾಮುಲು ಟೀಕೆ ಮಾಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ಡಿ.ಕೆ.ಶಿವಕುಮಾರ್ ಹೋಗಿ ಬಂದಿದ್ದು ಒಂದು ಅಪ್ರಸ್ತುತ. ಡಿ.ಕೆ.ಶಿವಕುಮಾರ್ ಉತ್ಸಾಹಿ ಇದ್ದಾರೆ. ಪಕ್ಷ ಕಟ್ಟುವ ಛಲ ಅವರಲ್ಲಿದೆ. ನಾವೆಲ್ಲರೂ ಅವರ ಜೊತೆಗೆ ಕೆಲಸ ಮಾಡುತ್ತೇವೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದೇ ಬರುತ್ತೆ ಎಂದರು.
ಡಿಕೆಶಿ ಅವರ ಸಾಮರ್ಥ್ಯ ಹಾಗೂ ಪಕ್ಷ ಸೇವೆ ನೋಡಿ ಪಕ್ಷ ಅವರಿಗೆ ಜವಾಬ್ದಾರಿ ನೀಡಿದೆ. ಹಿಂದೆ ಇದ್ದ ಕಾಂಗ್ರೆಸ್ ಬೇರೆ, ಇಂದಿನ ಕಾಂಗ್ರೆಸ್ ಬೇರೆ. ಎಲ್ಲರೂ ಒಗ್ಗಟ್ಟಾಗಿ ಪಕ್ಷ ಕಟ್ಟುವ ಕೆಲಸ ಮಾಡುತ್ತೇವೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಕಾರ್ಯಾಧ್ಯಕ್ಷರ ಸತ್ಕಾರದ ವೇಳೆ ಹೆಚ್ವಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿದ್ದರು. ಹೀಗಾಗಿ ಯಾರೂ ಕೂಡ ಸಾಮಾಜಿಕ ಅಂತರವನ್ನು ಕಾಪಾಡಲಿಲ್ಲ.