ಉಡುಪಿ: ಜಿಲ್ಲೆಯಲ್ಲಿ ಮಾನ್ಸೂನ್ ಮಳೆ ಧಾರಾಕಾರವಾಗಿ ಸುರಿಯುತ್ತಿದ್ದು, ಮೀನು ಹಿಡಿಯಲು ಹೋಗಿ ಇಬ್ಬರು ಯುವಕರು ನೀರುಪಾಲಾಗಿದ್ದಾರೆ. ಬ್ರಹ್ಮಾವರ ತಾಲೂಕು ಬಾರ್ಕೂರಿನಲ್ಲಿ ಈ ಘಟನೆ ನಡೆದಿದೆ.
ಬ್ರಹ್ಮಾವರ ತಾಲೂಕಿನ ಬಾರ್ಕೂರು ಹಾಲೆಕೊಡಿ ಹೊಳೆಗೆ ಹರ್ಷ ಮತ್ತು ಕಾರ್ತಿಕ್ ತೆರಳಿ ಕಳೆದ ರಾತ್ರಿ ಮೀನಿಗೆ ಬಲೆ ಹಾಕಿಟ್ಟಿದ್ದರು. ಇಂದು ಬೆಳಗ್ಗಿನ ಜಾವ ಕಟ್ಟಿದ್ದ ಬಲೆಯನ್ನು ಎಳೆಯುವಾಗ ಯುವಕರು ನೀರಿಗೆ ಬಿದ್ದಿದ್ದಾರೆ. ಈಜಲಾಗದೆ ಮುಳುಗಿ ಸತ್ತಿದ್ದಾರೆ ಎನ್ನಲಾಗಿದೆ.
- Advertisement 2
- Advertisement 3
ನದಿ ಬದಿಗೆ ಹೋದವರು ವಾಪಸ್ ಆಗದ ಕಾರಣ ಮನೆಯವರು ಹುಡುಕಾಟ ನಡೆಸಿದ್ದಾರೆ. ಸ್ಥಳೀಯರು ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು ಕಾರ್ಯಾಚರಣೆ ಮಾಡಿ ಮೃತದೇಹಗಳನ್ನು ಮೇಲಕ್ಕೆತ್ತಿದ್ದಾರೆ. ಮೃತ ವ್ಯಕ್ತಿಗಳಲ್ಲಿ ಓರ್ವರಾದ ಹರ್ಷ, ಖಾಸಗಿ ಫೆನಾನ್ಸ್ ಕಂಪನಿಯಲ್ಲಿ ರಿಕವರಿ ಕೆಲಸ ಮಾಡಿಕೊಂಡಿದ್ದರು. ಕಾರ್ತಿಕ್ ಕೊನೆಯ ವರ್ಷದ ಬಿಕಾಂ ವಿದ್ಯಾರ್ಥಿಯಾಗಿದ್ದ ಎಂದು ಸಂಬಂಧಿಕರು ಮಾಹಿತಿ ನೀಡಿದರು.
- Advertisement 4
ಕಳೆದ ರಾತ್ರಿ ಬಿಡಿಸಿಟ್ಟ ಬಲೆಯಲ್ಲಿ ಕಸ ಕಡ್ಡಿ ತುಂಬಿ ಹೆಚ್ಚು ಭಾರವಾಗಿರಬಹುದು. ಬಲೆ ಎಳೆಯುವ ಸಂದರ್ಭ ಆಯತಪ್ಪಿ ಹೊಳೆಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಇಬ್ಬರು ಯುವಕರ ಮೃತದೇಹಗಳನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.