ಕಲಬುರಗಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಮಠಾಧೀಶರು ಬೆಂಗಳೂರಿಗೆ ಹೋಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಆಗುವ ಅವಶ್ಯಕತೆಯಿಲ್ಲ. ದೆಹಲಿಗೆ ಹೋಗಿ ಹೈಕಮಾಂಡ್ ನಾಯಕರೊಂದಿಗೆ ಚರ್ಚೆ ನಡೆಸಬೇಕು ಎಂದು ಶ್ರೀಶೈಲ ಸಾರಂಗ ಮಠದ ಪೀಠಾಧಿಪತಿ ಶ್ರೀ ಮಹಾಂತ ಶಿವಾಚಾರ್ಯರು ಮಠಾಧೀಶರಿಗೆ ಕಿವಿ ಮಾತು ಹೇಳಿದರು.
ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಬೇಕಾದರೆ ಎಲ್ಲ ಮಠಾಧೀಶರು ಬಿ.ಎಸ್.ವೈ ಪರ ಮಾತನಾಡಲು ದೆಹಲಿಗೆ ಹೋಗಬೇಕು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮನವಿ ಮಾಡಬೇಕು. ಅವರೂ ನಮ್ಮ ಮಾತಿಗೆ ಬೆಲೆ ಕೊಡದಿದ್ದರೆ ಪಾರ್ಲಿಮೆಂಟ್ ಮುಂದೆ ಧರಣಿ ಕೂರಬೇಕು ಇದಕ್ಕೆ ನಾವೂ ಜೊತೆಯಾಗುತ್ತೇವೆ ಎಂದರು.
ಬಿಜೆಪಿಯನ್ನು 40 ವರ್ಷಗಳಿಂದ ತಳಮಟ್ಟದಿಂದ ಯಡಿಯೂರಪ್ಪ ಕಟ್ಟಿದ್ದಾರೆ. ಒಂದು ವೇಳೆ ಅವರನ್ನು ಸಿಎಂ ಸ್ಥಾನದಿಂದ ಇಳಿಸಿದರೆ ಅಪಾಯ ಎದುರಾಗಲಿದೆ. ಈ ಹಿಂದೆ ವೀರೇಂದ್ರ ಪಾಟೀಲ್ ಸಿಎಂ ಸ್ಥಾನದಿಂದ ಕೆಳಗಿಳಿಸಿ ಕಾಂಗ್ರೆಸ್ ನಷ್ಟವಾಗಿದೆ. ಇದೀಗ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಹೈಕಮಾಂಡ್ ಕೆಳಗಿಳಿಸಿದರೆ, ಕಾಂಗ್ರೆಸ್ಗೆ ಬಂದ ಸ್ಥಿತಿ ಬಿಜೆಪಿಗೂ ಬರುತ್ತದೆ.
ಬಿಜೆಪಿ ಹೈಕಮಾಂಡ್ ಬೇರೆ ರಾಜ್ಯಗಳಲ್ಲಿ ಆಟ ಆಡಿದಂತೆ ನಮ್ಮ ರಾಜ್ಯದಲ್ಲಿ ಆಟ ಆಡಬಾರದು ಎಂದು ಎಚ್ಚರಿಸಿದ್ದಾರೆ. ಅಲ್ಲದೆ ಒಂದು ವೇಳೆ ಸಿಎಂ ಬದಲಿಸುವದೇ ಆದರೆ ಮುರುಗೇಶ್ ನಿರಾಣಿಯವರಿಗೆ ಸಿಎಂ ಸ್ಥಾನ ನೀಡಬೇಕು. ಉತ್ತರ ಕರ್ನಾಟಕದ ಅದೂ ಪಂಚಮಸಾಲಿ ಸಮುದಾಯದ ಮುರುಗೇಶ್ ನಿರಾಣಿ ಅವರನ್ನು ಸಿಎಂ ಮಾಡಬೇಕು ಎಂದು ಸಾರಂಗಧರ ಶ್ರೀಗಳು ಹೇಳಿದ್ದಾರೆ.