ಬೆಂಗಳೂರು: ಒಂದು ವಾರಗಳ ಲಾಕ್ಡೌನ್ ಮುಗಿಯಲು ಇನ್ನೊಂದೇ ದಿನ ಬಾಕಿ ಇದೆ. ಆದರೆ ಇಂದು ಭೀಮನ ಅಮಾವಾಸ್ಯೆ ಹಿನ್ನೆಲೆಯಲ್ಲಿ ದೇವಸ್ಥಾನಗಳಲ್ಲಿ ಭಕ್ತಾದಿಗಳು ಸಾಲುಗಟ್ಟಿ ನಿಂತಿದ್ದಾರೆ.
ಬುಧವಾರ ಬೆಳಗ್ಗೆ 5 ಗಂಟೆಗೆ ಬೆಂಗಳೂರು ಲಾಕ್ಡೌನ್ ಅಂತ್ಯವಾಗಲಿದೆ. ಆದರೆ ಇಂದು ಭೀಮನ ಅಮಾವಾಸ್ಯೆ. ಹೀಗಾಗಿ ಮೈಸೂರು ರಸ್ತೆಯ ಗಾಳಿ ಆಂಜನೇಯ ದೇವಸ್ಥಾನದ ಮುಂದೆ ಭಕ್ತಾದಿಗಳು ಸಾಲುಗಟ್ಟಿ ನಿಂತಿದ್ದಾರೆ. ಇತ್ತ ಬೆಂಗಳೂರಿನ ಗವಿಪುರಂ ಗುಟ್ಟಳ್ಳಿಯಲ್ಲಿರುವ ಬಂಡಿ ಮಹಾಕಾಳಿ ದೇಗುಲದಲ್ಲಿ ಅಪಾರ ಜನರು ಬಂದಿದ್ದಾರೆ. ಲಾಕ್ಡೌನ್ ಇದ್ದರೂ ಅಮಾವಾಸ್ಯೆ ಹಿನ್ನೆಲೆಯಲ್ಲಿ ದೇವರ ದರ್ಶನ ಮಾಡಲು ನೂರಾರು ಜನರು ಬಂದಿದ್ದಾರೆ.
ಇನ್ನೂ ಭೀಮನಮಾವಾಸ್ಯೆ ಪ್ರಯುಕ್ತ ಮಾರುಕಟ್ಟೆಯಲ್ಲಿ ಜನರು ಭರ್ಜರಿಯಾಗಿ ವ್ಯಾಪಾರ ಮಾಡುತ್ತಿದ್ದಾರೆ. ಕೊರೊನಾ ಎಫೆಕ್ಟ್ ನಡುವೆಯೂ ಜನರು ಮಾಸ್ಕ್ ಧರಿಸುವುದನ್ನು ಮರೆತು ಮಲ್ಲೇಶ್ವರಂ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಆನಂದ್ ಪುರ ಮಾರುಕಟ್ಟೆಯಲ್ಲೂ ಮಾಸ್ಕ್ ಹಾಗೂ ಮುಂಜಾಗೃತ ಕ್ರಮಕೈಗಳದೇ ವ್ಯಾಪಾರದಲ್ಲಿ ಜನರು ಫುಲ್ ಬ್ಯುಸಿಯಾಗಿದ್ದಾರೆ. 12 ಗಂಟೆಯ ತನಕ ವ್ಯಾಪಾರಕ್ಕೆ ಅವಕಾಶ ಇರುವುದರಿಂದ ಪೊಲೀಸರು ಕ್ರಮ ಕೈಗೊಳ್ಳಲು ಹಿಂದೇಟು ಹಾಕಿದ್ದಾರೆ.
ಮೈಸೂರು ರಸ್ತೆಯ ಫ್ಲೈಓವರ್ ಕೆಳಭಾಗದಲ್ಲಿ ತರಕಾರಿ, ಹಣ್ಣು, ಸೊಪ್ಪು ವ್ಯಾಪಾರ ಜೋರಾಗಿ ನಡೆಯುತ್ತಿತ್ತು. ಆಗ ಸಾಮಾಜಿಕ ಅಂತರ ಕಾಯದ ಜನರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.
ಇತ್ತ ಶ್ರೀರಾಮಪುರದಲ್ಲಿ ಎಂದಿನಂತೆ ಜನರ ಹಾಗೂ ವಾಹನಗಳ ಸಂಚಾರವಿದೆ. ದೇವಸ್ಥಾನ ಸಹ ಒಪನ್ ಆಗಿದೆ. ಯಾವುದೇ ರೀತಿಯ ಸಾಮಾಜಿಕ ಅಂತರ ಕೂಡ ಇಲ್ಲದೆ ಜನರು ಗುಂಪು ಗುಂಪಾಗಿ ನೆರೆದಿದ್ದಾರೆ. ಟೌನ್ ಹಾಲ್ ಮುಂದೆ ವಾಹನಗಳ ಓಡಾಟ ಜೋರಾಗಿದೆ. ಮೈಸೂರು ರಸ್ತೆ, ಕಾರ್ಪೊರೇಷನ್, ಜಯನಗರ ಭಾಗದ ಎಲ್ಲ ವಾಹನಗಳು ಟೌನ್ ಹಾಲ್ ಮುಂದೆ ಸಂಚಾರ ಮಾಡುತ್ತಿವೆ.