ರಾಯಚೂರು: ಜಿಲ್ಲೆಯ ಮಾನ್ವಿಯಲ್ಲಿ ಬ್ಯಾಂಕ್ ಹಾಗೂ ಎಟಿಎಂ ಕಳ್ಳತನಕ್ಕೆ ವಿಫಲ ಯತ್ನ ನಡೆದಿದೆ. ರಾತ್ರಿ ವೇಳೆ ಸ್ಥಳೀಯರೊಬ್ಬರು ಎಚ್ಚರಗೊಂಡು ಫೋಟೋ ತೆಗೆದ ಹಿನ್ನೆಲೆ ಕಳ್ಳರು ಸ್ಥಳದಿಂದ ಓಡಿ ಹೋಗಿದ್ದಾರೆ.
ಮಾನ್ವಿಯ ಐಬಿ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ಗೆ ಕನ್ನ ಹಾಕಲು ಕಳ್ಳರು ಮುಂದಾಗಿದ್ದರು. ರಾತ್ರಿ ವೇಳೆ ಬ್ಯಾಂಕ್ ಬಾಗಿಲು ಬೀಗ ಮುರಿಯುವ ಯತ್ನ ವಿಫಲವಾದ ಹಿನ್ನೆಲೆ ಎಟಿಎಂ ಕಳ್ಳತನಕ್ಕೆ ಮುಂದಾಗಿದ್ದರು. ಪಕ್ಕದಲ್ಲೇ ವಾಸವಾಗಿರುವ ಸುಬ್ಬಾರಾವ್ ಎಂಬವರು ಎಚ್ಚರಗೊಂಡು ಫೋಟೋ ತೆಗೆದಿದ್ದಾರೆ.
ಸುಬ್ಬಾರಾವ್ ಮೇಲೆ ಹಲ್ಲೆ ಮಾಡಿ ಮೊಬೈಲ್ ಕಸಿದುಕೊಂಡು ಕಳ್ಳರು ಪರಾರಿಯಾಗಿದ್ದಾರೆ. ಇಬ್ಬರು ಕಳ್ಳರಿಂದ ಈ ಕೃತ್ಯ ನಡೆದಿದೆ. ಮಾನ್ವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ.