ಹಾಸನ: ಜಿಲ್ಲೆಯ ಅರಕಲಗೂಡು ತಾಲೂಕಿನ ಶಿರದನಹಳ್ಳಿ ರಸ್ತೆ ಬದಿ ಒಣಗಿದ್ದ ಮರ ವಿದ್ಯತ್ ತಂತಿ ಮೇಲೆ ಬಿದ್ದಿದ್ದು, ಬೆಂಕಿ ಹೊತ್ತಿ ಉರಿದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಕೊಣನೂರು- ಮೈಸೂರು ಮಾರ್ಗದ ರಸ್ತೆ ಬದಿ ಒಣಗಿ ನಿಂತಿದ್ದ ಮರವನ್ನು ತೆರವುಗೊಳಿಸಿರಲಿಲ್ಲ. ಮರದ ಬೃಹತ್ ಕೊಂಬೆ ವಿದ್ಯುತ್ ಲೈನ್ ಮೇಲೆ ಮುರಿದು ಬಿದ್ದಿದೆ. ಮರ ಬಿದ್ದ ರಭಸಕ್ಕೆ ಲೈನ್ ತುಂಡಾಗಿ ರಸ್ತೆ ಬದಿ ಚೆಲ್ಲಾಪಿಲ್ಲಿಯಾಗಿದೆ. ಈ ಮಾರ್ಗದ ರಸ್ತೆಯಲ್ಲಿ ಕೆಎಸ್ಆರ್ಟಿಸಿ ಬಸ್ ಗಳು ಸೇರಿದಂತೆ ನೂರಾರು ವಾಹನಗಳು ಸಂಚರಿಸುತ್ತವೆ. ಪಕ್ಕದಲ್ಲೇ ವಾಸದ ಮನೆಗಳು ಇವೆ. ರಸ್ತೆ ಕಡೆಗೆ ಮರದ ಕೊಂಬೆ ಲೈನ್ ಮೇಲೆ ಉರುಳಿದ ವೇಳೆ ಕೆಳಗೆ ಯಾರೊಬ್ಬರು ಇರದ ಕಾರಣ ಭಾರೀ ಅನಾಹುತ ತಪ್ಪಿದೆ.
ಮರ ಬಿದ್ದು ಬೆಂಕಿ ಹೊತ್ತಿರುವುದು ಎದೆಯನ್ನು ನಡುಗಿಸುವಂತಿದೆ ಎಂದು ಪ್ರತ್ಯಕ್ಷದರ್ಶಿಗಳು ಆತಂಕ ವ್ಯಕ್ತಪಡಿಸಿದರು. ಸಿಬ್ಬಂದಿ ವಿದ್ಯುತ್ ಸ್ಥಗಿತಗೊಳಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಕೊಣನೂರು ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದಾರೆ.