ಬೆಳಗಾವಿ: ಗೋಕಾಕ್ನಲ್ಲಿ ರಮೇಶ್ ಜಾರಕಿಹೊಳಿ ಬೆಂಬಲಿಗರ ಹುಚ್ಚಾಟ ಹೆಚ್ಚಾಗಿದ್ದು, ವ್ಯಕ್ತಿಯೊಬ್ಬ ಬೆಂಕಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಗಣಪತಿ ರಜಪೂತ (55) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಗೋಕಾಕ್ ನಗರದ ಚಿನವಾರ ಗಲ್ಲಿಯ ನಿವಾಸಿಯಾಗಿರುವ ಈತನ ಸ್ಥಿತಿ ಸದ್ಯ ಗಂಭೀರವಾಗಿದೆ.
ಸಾಹುಕಾರನ ರಾಸಲೀಲೆ ಪ್ರಕರಣ ಸಂಬಂಧ ರಮೇಶ್ ಜಾರಕಿಹೊಳಿ ಯಾವುದೇ ತಪ್ಪು ಮಾಡಿಲ್ಲ ಅಂತ ಅವರ ಅಭಿಮಾನಿಗಳು ಸಿಡಿ ಹೊರಬಂದಾಗಿನಿಂದಲೂ ಪ್ರತಿಭಟನೆ ನಡೆಸುತ್ತಿದ್ದಾರೆ. ಅಂತೆಯೇ ಇಂದು ಗೋಕಾಕ್ನ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಗಣಪತಿ ಅವರು ಬೆಂಕಿಯಿದ್ದ ಟೈಯರ್ ಮೇಲೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ.
ಈ ಘಟನೆ ನಡೆಯುತ್ತಿದ್ದಂತೆಯೇ ಸ್ಥಳೀಯರು ಕೂಡಲೇ ಅವರನ್ನು ಪೊಲೀಸರ ಸಹಾಯದಿಂದ ಅಂಬುಲೆನ್ಸ್ನಲ್ಲಿ ರವಾನೆ ಮಾಡಿದ್ದಾರೆ. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಮ್ಮ ಸಾಹುಕಾರ್ ಅಂಥವನಲ್ಲ, ಅಂಥ ತಪ್ಪು ಮಾಡಲ್ಲ. ತಪ್ಪು ಮಾಡುವುದು ಹೇಗೆ ಎಂಬುದು ಗೊತ್ತು ಕೂಡ ಇಲ್ಲ. ಈ ಕಲ್ಲಳ್ಳಿ ಯಾರಿವನು, ಈ ಪ್ರಕರಣ ಸಿಬಿಐ ತನಿಖೆ ಆಗಲೇ ಬೇಕು. ನಾನು ಸತ್ತು ಹೋಗಿದ್ದರೆ ಚೆನ್ನಾಗಿರುತ್ತಿತ್ತು ಎಂದು ಆಸ್ಪತ್ರೆಯಲ್ಲಿಯೇ ಗಣಪತಿ ಹೇಳಿದ್ದಾರೆ.