ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹಣಗೆರೆ ಸಮೀಪದ ಶಿರನಲ್ಲಿ ಗ್ರಾಮದ ಬಳಿ ನಿನ್ನೆ ರಾತ್ರಿ ಗುಂಡಿನ ದಾಳಿ ನಡೆದಿದೆ.
ಇದೇ ಗ್ರಾಮದ ರಾಮಚಂದ್ರ ರಾತ್ರಿ ಬುಲೆಟ್ ಬೈಕಿನಲ್ಲಿ ಸ್ನೇಹಿತನ ಜೊತೆ ಹೋಗುವ ವೇಳೆ ಕನ್ನಡ ಸಂಘಟನೆ ಮುಖಂಡ ಮಂಜುನಾಥ್ ಗೌಡ ನಾಡ ಬಂದೂಕಿನಿಂದ ದಾಳಿ ಮಾಡಿದ್ದಾನೆ. ಕಾಲಿಗೆ ಬಲವಾದ ಏಟು ಬಿದ್ದ ಹಿನ್ನೆಲೆಯಲ್ಲಿ ಗಾಯಗೊಂಡ ರಾಮಚಂದ್ರನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗುಂಡು ಹಾರಿಸಿದ ಮಂಜುನಾಥ್ ಗೌಡ ಪರಾರಿಯಾಗಿದ್ದಾನೆ. ಕ್ಷುಲ್ಲಕ ಕಾರಣಕ್ಕೆ ನಿನ್ನೆ ರಾತ್ರಿ ರಾಮಚಂದ್ರ ಅವರ ಮೇಲೆ ಮಂಜುನಾಥ್ ಗುಂಡಿನ ದಾಳಿ ನಡೆಸಿದ್ದಾನೆ. ಕೇವಲ ಆತನ ಬುಲೆಟ್ ಬೈಕಿನ ಶಬ್ದ ಜೋರಾಗಿತ್ತು. ಈ ಹಿನ್ನೆಲೆಯಲ್ಲಿ ರಾಮಚಂದ್ರನ ಮೇಲೆ ದಾಳಿ ನಡೆದಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಘಟನೆ ಸಂಬಂಧ ಮಾಳೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯ ಪತ್ತೆಗೆ ಮುಂದಾಗಿದ್ದಾರೆ.