ಹಾವೇರಿ: ಬಸ್ ನಲ್ಲಿ ಬಿಟ್ಟು ಹೋಗಿದ್ದ 2.5 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಮಾಂಗಲ್ಯ ಸರವನ್ನು ಮರಳಿ ಪ್ರಯಾಣಿಕರಿಗೆ ನೀಡಿ ಚಾಲಕ ಮತ್ತು ನಿರ್ವಾಹಕರು ಮಾನವೀಯತೆ ಮೆರೆದಿದ್ದಾರೆ.
ಜಿಲ್ಲೆಯ ಹಿರೇಕೆರೂರಿನಲ್ಲಿ ಘಟನೆ ನಡೆದಿದ್ದು, ಕೆಎಸ್ಆರ್ ಟಿಸಿ ಸ್ಲೀಪರ್ ಕೋಚ್ ಬಸ್ಸಿನಲ್ಲಿ ಬೆಂಗಳೂರಿನಿಂದ ಹಿರೇಕೆರೂರಿಗೆ ಪ್ರಯಾಣ ಮಾಡುವಾಗ ಹರಿಹರದ ಮಹಿಳೆಯೊಬ್ಬರು ಚಿನ್ನಾಭರಣವನ್ನ ಕಳೆದುಕೊಂಡಿದ್ದರು. ಆಭರಣವಿರುವ ಪರ್ಸ್ ನ್ನು ಬಸ್ಸಿನಲ್ಲಿ ಬಿಟ್ಟು ಹರಿಹರದಲ್ಲಿ ಇಳಿದಿದ್ದರು.
ಹಿರೇಕೆರೂರಿನ ನಿಲ್ದಾಣಕ್ಕೆ ಬಸ್ ತಲುಪಿದ ನಂತರ ಮಹಿಳೆ ಇದ್ದ ಸೀಟಿನಲ್ಲಿ ಪರ್ಸ್ ಇರುವುದನ್ನು ಗಮನಿಸಿದರು. ಬಳಿಕ ನಿರ್ವಾಹಕರಾದ ಬಿ.ಪಿ.ಶೆಟ್ಟರ್, ಚಾಲಕ ಪ್ರಭು ಮರಿಗೌಡರ್ ಪಸ್ ಯಾರದಿರಬಹುದೆಂದು ಯೋಚಿಸಿ, ಪತ್ತೆ ಹಚ್ಚಲು ಮುಂದಾದರು. ನಂತರ ಹಿರೇಕೆರೂರಿನ ಬಸ್ ನಿಲ್ದಾಣಕ್ಕೆ ಪರ್ಸ್ ವಾರಸುದಾರರಾದ ಮಹಿಳೆಯನ್ನು ಕರೆಸಿ 2.50 ಲಕ್ಷ ರೂಪಾಯಿ ಬೆಲೆ ಬಾಳುವ 50 ಗ್ರಾಂ. ಚಿನ್ನದ ಮಾಂಗಲ್ಯ ಸರವನ್ನು ವಾಪಸ್ ನೀಡಿದ್ದಾರೆ.
ಚಾಲಕ ಮತ್ತು ನಿರ್ವಾಹಕರ ಕಾರ್ಯಕ್ಕೆ ಸ್ಥಳೀಯರು ಹಾಗೂ ಸಾರ್ವಜನಿಕರು ಸೇರಿದಂತೆ ಸಾರಿಗೆ ನೌಕರರ ಮುಖಂಡ ಜಿ.ಎಸ್.ದೊಡ್ಡಗೌಡರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.