– ಬಂದೂಕಿನಿಂದ ಗುಂಡು ಹಾರಿಸಿ ಕೊಲೆ ಮಾಡುವುದಾಗಿ ಬೆದರಿಕೆ
ಬೀದರ್: ಹುಡುಗ ಬಡವ ಎನ್ನುವ ಕಾರಣಕ್ಕೆ ವಿವಾಹಿತ ಪ್ರೇಮಿಗಳಿಗೆ ಯುವತಿಯ ತಂದೆ ಜೀವ ಬೆದರಿಕೆ ಹಾಕಿರುವ ಘಟನೆ ಬೀದರ್ ನಲ್ಲಿ ನಡೆದಿದೆ.
ಬೀದರ್ ತಾಲೂಕಿನ ಅಣದೂರು ಗ್ರಾಮದಲ್ಲಿ ಘಟನೆ ನಡೆದಿದ್ದು, ಔತಣಕೂಟದಲ್ಲಿ ಹುಡುಗಿ ತಂದೆಯ ಕಡೆಯಿಂದ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಲಾಗಿದೆ. ಅಲ್ಲದೆ ಗುಂಡು ಹಾರಿಸಿ ಯುವಕನ ಕುಟುಂಬಸ್ಥರನ್ನು ಕೊಲೆ ಮಾಡುವುದಾಗಿ ಯುವತಿಯ ತಂದೆ ಮಗಳಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ.
ಹಲವು ವರ್ಷಗಳಿಂದ ಪ್ರೀತಿಸಿ, ಕಳೆದ ಫೆಬ್ರವರಿಯಲ್ಲಿ ರಿಜಿಸ್ಟರ್ ಮದುವೆಯಾಗುವ ಮೂಲಕ ಪ್ರೇಮಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ ಇದೀಗ ಹುಡುಗ ಬಡವನೆಂದು ತಿಳಿದ ಯುವತಿಯ ತಂದೆ ವಿಶ್ವನಾಥ್, ಬಂದೂಕಿನಿಂದ ಗುಂಡು ಹಾರಿಸಿ ಕೊಲೆ ಮಾಡುವುದಾಗಿ ಫೋನ್ ನಲ್ಲಿ ಬೆದರಿಕೆ ಹಾಕಿದ್ದಾನೆ. ಯಶವಂತ್ ಹಾಗೂ ಸ್ನೇಹ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ನಂತರ ರಿಜಿಸ್ಟರ್ ಮದುವೆಯಾಗಿದ್ದಾರೆ. ಹುಡುಗಿ ತಂದೆ ವಿಶ್ವನಾಥ್ ಸರ್ಕಾರಿ ಶಾಲೆಯಲ್ಲಿ ಮುಖ್ಯ ಶಿಕ್ಷಕನಾಗಿದ್ದು, ರಾಜಕೀಯವಾಗಿ ಗುರುತಿಸಿಕೊಂಡಿದ್ದಾನೆ. ಹೀಗಾಗಿ ಬೆದರಿಕೆ ಹಾಕುತ್ತಿದ್ದಾನೆ.
ಬೀದರ್ ತಾಲೂಕಿನ ಅಣದೂರು ಗ್ರಾಮದಲ್ಲಿ ದಂಪತಿ ಔತಣಕೂಟ ನೀಡುವಾಗ ಹುಡುಗಿ ತಂದೆಯ ಕಡೆಯ ಹತ್ತಾರು ಪುಂಡರ ಗುಂಪೊಂದು ಹುಡುಗನ ಕುಟುಂಬಸ್ಥರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದೆ. ಹೀಗಾಗಿ ನಮಗೆ ಜೀವ ಭಯವಿದೆ ರಕ್ಷಣೆ ನೀಡಿ ಎಂದು ಎಸ್ಪಿ ಗೆ ದೂರು ನೀಡಲು ಪ್ರೇಮಿಗಳು ನಿರ್ಧಾರ ಮಾಡಿದ್ದಾರೆ. ಈಗಾಗಲೇ ಅಪಹರಣ, ಗಲಭೆ, ಜೀವ ಬೆದರಿಕೆ ಸೇರಿದಂತೆ ಸಂಬಂಧಿಸಿದ ಕಾಯ್ದೆಯಡಿ ಜನವಾಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಎಸ್ಪಿ ಡಿ.ಎಲ್.ನಾಗೇಶ್ ಮಾಹಿತಿ ನೀಡಿದ್ದಾರೆ.