– ಮಗುವಿನೊಂದಿಗೆ ಮನೆಬಿಟ್ಟು ಬಂದಿದ್ದ ಮಹಿಳೆ
– ತನನ್ನೇ ಅಪ್ಪ ಎಂದು ಕರೆಯಲು ಚಿತ್ರಹಿಂಸೆ ನೀಡಿದ್ದ
ಚಿತ್ರದುರ್ಗ: ಪ್ರಿಯತಮೆಯ ಪುತ್ರನಿಗೆ ಬರೆಹಾಕಿದ್ದ ಆರೋಪಿ ಬಂಧನ ಭೀತಿಯಿಂದ ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿರುವ ಘಟನೆ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಚಿತ್ರಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಚಿತ್ರದುರ್ಗ ತಾಲೂಕಿನ ಗಟ್ಟಿ ಹೊಸಹಳ್ಳಿ ಗ್ರಾಮದ ಶಿವಮೂರ್ತಿ (30) ಆತ್ಮಹತ್ಯೆಗೆ ಯತ್ನಿಸಿದ್ದು, ಈತನ ಪ್ರೀತಿಯಬಲೆಗೆ ಬಿದಿದ್ದ ಹೊಳಲ್ಕೆರೆ ತಾಲೂಕಿನ ತಾಳ್ಯಾ ಗ್ರಾಮದ ನಿಂಗಮ್ಮ (ಶೃತಿ) (24) ಮನೆಬಿಟ್ಟು ಬಂದಿದ್ದಳು. ಈಕೆಗೆ ಜಯಪ್ಪನೊಂದಿಗೆ ಮದುವೆಯಾಗಿ ಏಳು ವರ್ಷ ಕಳೆದಿದ್ದು, ಇಬ್ಬರ ದಾಂಪತ್ಯ ಜೀವನಕ್ಕೆ ಸಾಕ್ಷಿಯಾಗಿ ಗಂಡು ಮಗು ಕೂಡ ಇದೆ. ಆದರೆ ಇತ್ತೀಚೆಗೆ ಘಟ್ಟಿ ಹೊಸಹಳ್ಳಿ ಗ್ರಾಮದ ಶಿವಮೂರ್ತಿಯೊಂದಿಗೆ ಬೆಳೆದ ಸಲಿಗೆ, ಪ್ರೀತಿಯಾಗಿ ಆಕೆ ಗಂಡನನ್ನೇ ಬಿಟ್ಟುಬಂದಿದ್ದಳು.
ಗಂಡನ ಮನೆ ಬಿಟ್ಟು ತನ್ನ ಆರು ವರ್ಷದ ಮಗುವಿನೊಂದಿಗೆ ಬಂದ ಶೃತಿ ಕೆಲ ದಿನಗಳಿಂದ ಗಟ್ಟಿ ಹೊಸಹಳ್ಳಿಯಲ್ಲಿ ವಾಸವಾಗಿದ್ದಳು. ಆದರೆ ಪ್ರಿಯಕರ ಶಿವಮೂರ್ತಿ ಮಾತ್ರ ಏನು ಅರಿಯದ ಪ್ರಿಯತಮೆಯ ಮಗುವಿಗೆ ನೀನು ನನ್ನನ್ನು ಅಪ್ಪ ಎಂದು ಕರೆಯಬೇಕು ಎಂದು ಹೇಳಿ ಆಂಧ್ರ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಚಿತ್ರಹಿಂಸೆ ನೀಡಿದ್ದ. ಮಗುವಿನ ಕಾಲು ಹಾಗೂ ಕೈ ಮೇಲೆ ಬೆಂಕಿಯಿಂದ ಬರೆ ಹಾಕಿದ್ದ. ಈ ವೇಳೆ ಅಡ್ಡ ಬಂದ ಶೃತಿಗೂ ಸುಟ್ಟ ಗಾಯಗಳಾಗಿವೆ. ಜೊತೆಗೆ ಚಪಾತಿ ಲಟ್ಟಿಸುವ ಲಟ್ಟಣಿಗೆಯಿಂದ ಆರೋಪಿ ಮಗುವಿನ ಮೇಲೆ ಹಲ್ಲೆ ಮಾಡಿದ್ದ. ಗಾಯಗಳಿಂದ ನರಳಾಡುತ್ತಿದ್ದ ಬಾಲಕನನ್ನು ಗಮನಿಸಿದ್ದ ಗ್ರಾಮಸ್ಥರು ಮಗುವನ್ನು ರಕ್ಷಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು.
ಬಾಲಕ ಬಳಿಕ ತನಗಾಗುತ್ತಿರುವ ಚಿತ್ರಹಿಂಸೆ ಬಗ್ಗೆ ಪೊಲೀಸರ ಮುಂದೆ ವಿವರವಾಗಿ ಬಿಚ್ಚಿಟ್ಟಿದ್ದ. ಆರೋಪಿ ಶಿವಮೂರ್ತಿ ವಿರುದ್ಧ ಚಿತ್ರಹಳ್ಳಿ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ. ಘಟನೆ ಕುರಿತಂತೆ ಮಹಿಳಾ ಮಕ್ಕಳ ರಕ್ಷಣಾ ಇಲಾಖೆಯವರಿಗೆ ಯಾವುದೇ ಮಾಹಿತಿ ಇರಲಿಲ್ಲ. ಇತ್ತ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದಂತೆ ಮಾಹಿತಿ ತಿಳಿದು ಆತಂಕಗೊಂಡಿದ್ದ ಶಿವಮೂರ್ತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆದರೆ ಪೊಲೀಸರ ಸಮಯಪ್ರಜ್ಞೆಯಿಂದ ಆರೋಪಿ ಪ್ರಾಣಾಪಾಯದಿಂದ ಪಾರಾಗಿದ್ದೂ, ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಘಟನೆಯಿಂದ ನೊಂದಿರುವ ಬಾಲಕ ತನಗೆ ಇವರ ಸಹವಾಸವೇ ಬೇಡ. ನನಗೆ ನಮ್ಮ ತಂದೆ ಜಯಪ್ಪನ ಹತ್ತಿರ ಕರೆದುಕೊಂಡು ಹೋಗಿ. ನನಗೆ ತಾಯಿಯೂ ಬೇಡ, ಯಾರು ಬೇಡ ಎಂದು ಅಂಗಲಾಚಿದ್ದಾನೆ. ಆದರೆ ಇವರ ಸ್ವಾರ್ಥಕ್ಕಾಗಿ ಮಗುವಿನ ಮೇಲೆ ದೌರ್ಜನ್ಯ ಎಸಗಿರುವ ಆರೋಪಿ ವಿರುದ್ಧ ಚಿತ್ರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಶಿವಮೂರ್ತಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.