– ಕುತೂಹಲಕ್ಕೆ ಕಾರಣವಾದ ಇಬ್ಬರು ನಾಯಕರ ಭೇಟಿ
ಚಿಕ್ಕೋಡಿ/ಬೆಳಗಾವಿ: ಕುಡಚಿ ಕ್ಷೇತ್ರದ ಬಿಜೆಪಿ ಶಾಸಕ ಪಿ.ರಾಜೀವ್ ಅವರ ರಾಜಕೀಯ ಬದ್ಧ ವೈರಿ ಕಾಂಗ್ರೆಸ್ನ ಮಾಜಿ ಶಾಸಕ ಶಾಮ ಘಾಟಗೆ ಅವರ ತೋಟದ ಮನೆಗೆ ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಭೇಟಿ ನೀಡಿದ್ದಾರೆ.
ರಮೇಶ್ ಜಾರಕಿಹೊಳಿ ಅವರ ಪುತ್ರ ಅಮರನಾಥ್ ಜಾರಕಿಹೊಳಿ, ಸಹೋದರ ಲಖನ್ ಜಾರಕಿಹೊಳಿ ಹಾಗೂ ಅವರ ಅಳಿಯ ಅಂಬಿರಾವ ಪಾಟೀಲ್ ಅವರೊಂದಿಗೆ ಬೆಳಗಾವಿ ಜಿಲ್ಲೆಯ ಕುಡಚಿ ಪಟ್ಟಣದಲ್ಲಿರುವ ಶಾಮ ಘಾಟಗೆ ಅವರ ಮನೆಗೆ ಭೇಟಿ ನೀಡಿದ್ದಾರೆ. ಇವರ ಭೇಟಿ ಇದೀಗ ಕೂತೂಹಲಕ್ಕೆ ಕಾರಣವಾಗಿದೆ.
ಕುಡಚಿ ಶಾಸಕ ಪಿ.ರಾಜೀವ್ ಅವರು ರಮೇಶ್ ಜಾರಕಿಹೊಳಿ ಅವರಿಂದ ದೂರ ಉಳಿದಿದ್ದು, ಅವರಿಗೆ ಎಚ್ಚರಿಕೆ ಸಂದೇಶ ನೀಡಲು ಶಾಮ ಘಾಟಗೆ ಅವರ ಮನೆಗೆ ರಮೇಶ್ ಜಾರಕಿಹೊಳಿ ಭೇಟಿ ನೀಡಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಒಂದು ಗಂಟೆಗೂ ಅಧಿಕ ಕಾಲ ಶಾಮ ಘಾಟಗೆ ಅವರ ಮನೆಯಲ್ಲಿ ಚರ್ಚೆ ನಡೆಸಿ, ಅವರ ತೋಟಕ್ಕೆ ಭೇಟಿ ನೀಡಿ, ಮಾಹಿತಿ ಪಡೆದಿದ್ದಾರೆ. ಬಳಿಕ ಅಲ್ಲಿಂದ ತೆರಳಿದ್ದಾರೆ.
ಸಿಡಿ ಲೇಡಿ ಪ್ರಕರಣದಲ್ಲಿ ಸ್ವಪಕ್ಷೀಯರ ಮೇಲೆ ಮುನಿಸುಕೊಂಡಿರುವ ರಮೇಶ ಜಾರಕಿಹೊಳಿ, ಈಗ ಕುಡಚಿ ಶಾಸಕ ಪಿ.ರಾಜೀವ್ ಅವರ ರಾಜಕೀಯ ವಿರೋಧಿ ಮನೆಗೆ ಭೇಟಿ ನೀಡಿ ಚರ್ಚೆ ನಡೆಸಿದ್ದು ಹಲವು ಕೂತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.