ಕೋಲಾರ: ಕುಡಿದ ಅಮಲಿನಲ್ಲಿದ್ದ ಅಂಧ ಪತಿಯೊಬ್ಬ ಪತ್ನಿಗೆ ದೈಹಿಕವಾಗಿ ಹಿಂಸೆ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಐನೋರಹೊಸ ಹಳ್ಳಿಯಲ್ಲಿ ನಡೆದಿದೆ.
ರತ್ನಮ್ಮ (28) ಕೊಲೆಯಾದ ದುರ್ದೈವಿ. ಪತಿ ಮಂಜುನಾಥ್ ಕುಡಿದ ಅಮಲಿನಲ್ಲಿ ಪತ್ನಿಯ ಎದೆ, ಮೈ-ಕೈ, ಕುತ್ತಿಗೆ, ಗುಪ್ತಾಂಗವನ್ನ ಬಾಯಿಂದ ಕಚ್ಚಿ ಭೀಕರವಾಗಿ ಕೊಲೆ ಮಾಡಿದ್ದಾನೆ. ಆರೋಪಿ ಮಂಜುನಾಥ್ ರೈಲು ನಿಲ್ದಾಣ ಹಾಗೂ ಪಟ್ಟಣದಲ್ಲಿ ಭಿಕ್ಷೆ ಬೇಡಿ ಬಡತನದ ಮಧ್ಯೆ ಜೀವನ ನಡೆಸುತ್ತಿದ್ದನು. ಪತ್ನಿಯ ಮೇಲೆ ಹಲ್ಲೆ ಮಾಡಿದ್ದಲ್ಲದೇ ಗಾಯಗೊಂಡು ಬಿದ್ದಿದ್ದ ಹೆಂಡತಿಯನ್ನ ಮನೆಯೊಳಗೆ ಬಿಟ್ಟು, ಮಕ್ಕಳನ್ನ ಮನೆಯಿಂದ ಹೊರ ಹಾಕಿ ಪರಾರಿಯಾಗಿದ್ದಾನೆ.
ರತ್ನಮ್ಮ ಸಂಬಂಧಿಕರು ಬಂದು ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಸಂಜೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಆರೋಪಿ ಮಂಜುನಾಥ್ಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ತಂದೆಯ ಅವಾಂತರದಿಂದ ಇಬ್ಬರು ಮಕ್ಕಳು ಕೂಡ ಈಗ ಅನಾಥವಾಗಿದ್ದಾರೆ.
ಕೊರೊನಾ ಲಾಕ್ಡೌನ್ ಆಗಿ ರೈಲುಗಳಿಲ್ಲದ ಹಿನ್ನೆಲೆಯಲ್ಲಿ ಕಳೆದ ನಾಲ್ಕು ತಿಂಗಳಿನಿಂದ ಭಿಕ್ಷೆ ಬೇಡಲು ಸಾಧ್ಯವಾಗುತ್ತಿರಲಿಲ್ಲ. ಆದರೂ ಪಟ್ಟಣದಲ್ಲಿ ಭಿಕ್ಷೆ ಬೇಡಿ ಬಂದ ಹಣದಲ್ಲಿ ಕುಡಿದು ಬಂದು ಪತ್ನಿಯ ಮೇಲೆ ಹಲ್ಲೆ ಮಾಡುತ್ತಿದ್ದನು. ಅಲ್ಲದೇ ನೆರೆಹೊರೆಯವರ ಮೇಲೂ ರೌಡಿಯಿಸಂ ತೋರಿಸುತ್ತಿದ್ದನು. ನಾಲ್ಕು ದಿನಗಳಿಂದ ಪತ್ನಿಯ ಎದೆಯನ್ನ, ಮೈ-ಕೈ ಹಾಗೂ ಗುಪ್ತಾಂಗವನ್ನ ಕಚ್ಚಿ ಗಾಯಗೊಳಿಸುತ್ತಿದ್ದನು. ಅಲ್ಲದೇ ತಲೆಗೆ ಹೊಡೆದು ಗಾಯಗೊಳಿಸಿದರ ಪರಿಣಾಮ ಆಕೆ ಮೃತಪಟ್ಟಿದ್ದಾಳೆ ಎಂದು ಗ್ರಾಮದ ಮಹಿಳೆಯೊಬ್ಬರು ಹೇಳಿದ್ದಾರೆ.
ಆರೋಪಿ ಅಂಗವಿಕಲನೂ ಎನ್ನದೆ ಆತನಿಗೆ ಶಿಕ್ಷೆಯಾಗಬೇಕು. ಮಗನಿಗೆ ಸಾಥ್ ನೀಡುತ್ತಿದ್ದ ತಾಯಿಯನ್ನು ಬಂಧಿಸಿ ಎಂದು ಗ್ರಾಮದ ಮಹಿಳೆಯರು ಕೆಜಿಎಫ್ ಎಸ್ಪಿ ಇಲಕ್ಕಿಯಾ ಕರುಣಾಗರನ್ ಅವರಿಗೆ ಮನವಿ ಸಲ್ಲಿಸಿದರು ಸದ್ಯಕ್ಕೆ ಆರೋಪಿ ಪತಿ ಮಂಜುನಾಥ್ನನ್ನು ಬಂಗಾರಪೇಟೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.