ಕಾರವಾರ: ಹಾವೇರಿಯಿಂದ ಶಿರಸಿ ಮೂಲಕ ಮಂಗಳೂರಿಗೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 26 ಟನ್ ಪಡಿತರ ಅಕ್ಕಿಯನ್ನು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಚಿಪಗಿ ಚೆಕ್ ಪೋಸ್ಟ್ ಬಳಿ ಗ್ರಾಮೀಣ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪತ್ತೆಯಾಗಿದ್ದು ಹೇಗೆ?
ಗ್ರಾಮೀಣ ಠಾಣೆ ಪೊಲೀಸರು ಕಂಟೇನರ್ ವಾಹನ ತಪಾಸಣೆ ನಡೆಸಿದ ವೇಳೆ ದಾಖಲೆ ಇಲ್ಲದ ಅಕ್ಕಿ ದಾಸ್ತಾನು ಪತ್ತೆಯಾಗಿದೆ. ವಿಚಾರಣೆ ನಡೆಸಿದ ಬಳಿಕ ಇವು ಪಡಿತರ ವಿತರಣೆಗೆ ಬಳಕೆಯಾಗಬೇಕಿದ್ದ ದಾಸ್ತಾನು ಎಂಬುದು ದೃಢಪಟ್ಟಿದೆ. ಇವುಗಳ ಒಟ್ಟು ಮೌಲ್ಯ 5.85 ಲಕ್ಷ ರೂಪಾಯಿಯಾಗಿದ್ದು, ಸಾಗಾಟಕ್ಕೆ ಬಳಸಿದ್ದ ವಾಹನ ಸಮೇತ ಅಕ್ಕಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಚರ್ಚಾಸ್ಪದ ಧ್ವನಿಸುರುಳಿ ಒಂದು ಕುಚೋದ್ಯ: ಶ್ರೀನಿವಾಸ್ ಪೂಜಾರಿ
ಪ್ರಕರಣಕ್ಕೆ ಸಂಬಂಧಿಸಿದಂತೆ ವಾಹನ ಚಾಲಕ ಸಂಗಪ್ಪ ಅಸೂಟಿ ಎಂಬಾತನನ್ನು ಬಂಧಿಸಲಾಗಿದೆ. ಅಕ್ಕಿ ದಾಸ್ತಾನು ಮಾಡಿದ್ದ ಹಾವೇರಿಯ ಸಚಿನ್ ಕಬ್ಬೂರ ಹಾಗೂ ಅಕ್ಕಿ ಖರೀದಿಸಲು ಯತ್ನಿಸಿದ್ದ ಮಂಗಳೂರಿನ ಗಣೇಶ ಕಂಪನಿಯ ವ್ಯವಸ್ಥಾಪಕ ಬ್ರಿಜೇಶ್ ಶೆಟ್ಟಿ ಎಂಬುವವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.