– ಅಕ್ರಮದಲ್ಲಿ ತೊಡಗದಂತೆ ಎಚ್ಚರಿಕೆ
ನೆಲಮಂಗಲ: ಸಾರ್ವಜನಿಕರ ದೂರಿನ ಹಿನ್ನೆಲೆ ಆಹಾರ ಸಚಿವ ಗೋಪಾಲಯ್ಯ ನಗರದ ಹೊರವಲಯದ ನೆಲಮಂಗಲ ತಾಲೂಕಿನ ಹಲವು ಪಡಿತರ ಅಂಗಡಿಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
ನೆಲಮಂಗಲ ತಾಲೂಕಿನ ಕುಲವನಹಳ್ಳಿ, ಬಿಲ್ಲಿನಕೋಟೆ, ಡಾಬಸ್ ಪೇಟೆ, ಶಿವಗಂಗೆ ಗ್ರಾಮಗಳಿಗೆ ಸಚಿವರು ಆಗಮಿಸಿ ಪಡಿತರ ವೀಕ್ಷಿಸಿದರು. ಇದೇ ವೇಳೆ ಅಕ್ರಮದಲ್ಲಿ ಭಾಗಿಯಾಗದಂತೆ ಮಾಲೀಕರಿಗೆ ತಾಕೀತು ಮಾಡಿದರು. ಅಲ್ಲದೆ ಸ್ಥಳದಲ್ಲೇ ಎಲ್ಲರಿಗೂ ದಿನಸಿ ವಿತರಣೆ ಮಾಡುವಂತೆ ಆದೇಶ ನೀಡಿದರು. ತೂಕ, ಗುಣಮಟ್ಟ ಕಾಪಾಡಿ ಬಡವರಿಗೆ ನೆರವಾಗುವಂತೆ ನ್ಯಾಯ ಬೆಲೆ ಅಂಗಡಿ ಮಾಲೀಕರಿಗೆ ತಿಳಿಸಿದರು.
ರಾಜ್ಯದ ಎಲ್ಲ ಜನರಿಗೂ ಆಹಾರ ಸಿಗುವಂತೆ ಮಾಡುವುದು ನಮ್ಮ ಸರ್ಕಾರದ ಗುರಿ, ಪಡಿತರ ಕಾಡ್9 ಇಲ್ಲದ ಹೊರ ಊರು, ಜಿಲ್ಲೆ, ಹೊರ ರಾಜ್ಯದ ಎಲ್ಲರಿಗೂ ದಿನಸಿ ನೀಡುವಂತೆ ಆದೇಶ ನೀಡಲಾಗಿದೆ. ವಲಸಿಗರಿಗೂ ಉಚಿತವಾಗಿ ಪಡಿತರ ನೀಡಲು ಆದೇಶಿಸಲಾಗಿದೆ. ರಾಜ್ಯದ ಕಟ್ಟೆಕಡೆಯ ವ್ಯಕ್ತಿಯ ಹಸಿವು ನಿಗಿಸಲು ನಮ್ಮ ಸರ್ಕಾರ ಮುಂದಾಗಿದೆ. ಎಲ್ಲರಿಗೂ ಪಡಿತರ ವ್ಯವಸ್ಥೆಯಾಗಬೇಕು ಎಂದರು.
ರಾಗಿ ಖರೀದಿ ಕೇಂದ್ರದಲ್ಲಿ 2ಕೆ.ಜಿ ಅಧಿಕ ರಾಗಿ ಪಡೆಯುವ ವಿಚಾರವಾಗಿ ಮಾತನಾಡಿದ ಅವರು, ಈ ವಿಷಯ ನನಗೆ ತಿಳಿದಿಲ್ಲ, ಮಾಹಿತಿ ಪಡೆದು ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಪ್ರತಿಯೊಬ್ಬರಿಗೂ 2 ಕೆ.ಜಿ ಕಡಲೆಕಾಳು ಹಾಗೂ ರಾಗಿ ವಿತರಣೆ ಮಾಡುವ ನಿಯಮ ರೂಪಿಸಲಾಗಿದೆ. ಮುಂದಿನ ತಿಂಗಳಿನಿಂದ ನೂತನ ಯೋಜನೆ ಜಾರಿಯಾಗಲಿದೆ. ಕೋವಿಡ್-19 ಹಿನ್ನೆಲೆಯಲ್ಲಿ ಶಿವಗಂಗೆಯ ದೇವಸ್ಥಾನಕ್ಕೆ ತೆರಳದೇ ಬಾಗಿಲಿನಲ್ಲೇ ಕರ್ಪೂರ ಬೆಳಗಿ, ದೇವರಿಗೆ ನಮಿಸಿ, ಸಾಮಾಜಿಕ ಅಂತರ ಪಾಲನೆ ಮಾಡಿದರು. ಈ ವೇಳೆ ನೆಲಮಂಗಲ ತಹಶಿಲ್ದಾರ್ ಶ್ರೀನಿವಾಸ್, ಆಹಾರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.