ಬೆಂಗಳೂರು: ನಾಳೆ ಆಸ್ಪತ್ರೆಗೆ ಹೋಗಬೇಕು ಅಂತಾ ಪ್ಲಾನ್ ಮಾಡಿಕೊಂಡಿದ್ದರೆ ಅದನ್ನ ಒಂದು ದಿನ ಮುಂದಕ್ಕೆ ಹಾಕಿಕೊಳ್ಳಿ. ಎಮರ್ಜೆನ್ಸಿ ಹೊರತು ಉಳಿದ ಕಾಯಿಲೆಗಳಿಗೆ ನಾಳೆ ಚಿಕಿತ್ಸೆ ಸಿಗಲ್ಲ. ಶುಕ್ರವಾರ ಖಾಸಗಿ ಆಸ್ಪತ್ರೆಗಳ ಎಲ್ಲಾ ಓಪಿಡಿ (ಹೊರ ರೋಗಿಗಳ ವಿಭಾಗ)ಗಳು ಬಂದ್ ಆಗಲಿದೆ. ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲು ವೈದ್ಯರು ನಾಳೆ ಬಂದ್ ಮಾಡ್ತಿದ್ದಾರೆ.
ಕಳೆದ ಶನಿವಾರವಷ್ಟೇ ಕನ್ನಡ ಸಂಘಟನೆಗಳ ಬಂದ್ ಮಾಡಿದ್ದರು. ರೈತ ಸಂಘಟನೆಗಳಂತೂ 4 ದಿನಗಳಿಂದ ಬಂದ್, ಪ್ರತಿಭಟನೆ ನಡೆಸುತ್ತಿದ್ದಾರೆ ಇದೇ ಸಮಯ ಅಂತ ಇವತ್ತು ಸಾರಿಗೆ ನೌಕರರು ಕೂಡ ರೈತರ ಜೊತೆ ಸೇರ್ಕೊಂಡು ಬೀದಿಗಿಳಿದಿದ್ದರು. ಈ ಬೆನ್ನಿಗೆ ಖಾಸಗಿ ಆಸ್ಪತ್ರೆ ವೈದ್ಯರು ಮುಷ್ಕರಕ್ಕೆ ಮುಂದಾಗಿದ್ದಾರೆ. ಕೇಂದ್ರ ಸರ್ಕಾರದ ಮತ್ತೊಂದು ಗೆಜೆಟ್ ನೋಟಿಫಿಕೇಶನ್ ವಿರುದ್ಧ ವೈದ್ಯರು ಸಿಡಿದೆದ್ದಿದ್ದಾರೆ. ನಾಳೆ ದೇಶವ್ಯಾಪಿ ಓಪಿಡಿ ಬಂದ್ ಮಾಡೋ ಮೂಲಕ ಪ್ರತಿಭಟನೆ ಮಾಡಲು ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಕರೆ ನೀಡಿದೆ.
ವೈದ್ಯಲೋಕದ ಬಂದ್ ಯಾಕೆ?: ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಮೂಲಕ ಆಯುರ್ವೇದಿಕ್ ವ್ಯಾಸಂಗ ಮಾಡಿದ ವೈದ್ಯರು, ಅಲೋಪತಿ ವೈದ್ಯರು ಮಾಡುವ ಅನೇಕ ಶಸ್ತ್ರಚಿಕಿತ್ಸೆಯನ್ನು ಮಾಡಬಹುದೆಂದು ಆದೇಶ ಹೊರಡಿಸಿದೆ. ಇದನ್ನು ವಿರೋಧಿಸಿ ಖಾಸಗಿ ಆಸ್ಪತ್ರೆ ವೈದ್ಯರು ಮುಷ್ಕರ ಮಾಡಲು ಮುಂದಾಗಿದ್ದಾರೆ. ಆಯುರ್ವೇದ ವೈದ್ಯರಿಗೆ ಸರ್ಜರಿ ಮಾಡಲು ಅವಕಾಶ ಕೊಡಬಾರದು. ಆ ಅಧಿಸೂಚನೆಯನ್ನ ತಿದ್ದುಪಡಿ ಮಾಡಬೇಕು ಎಂದು ಒತ್ತಡ ಹಾಕಲು ನಾಳೆ ಬೆಳಗ್ಗೆ 6 ರಿಂದ ಸಂಜೆ 6ರ ವರೆಗೆ ಓಪಿಡಿ ಬಂದ್ ಮಾಡುತ್ತಿದ್ದಾರೆ.
ಕೇಂದ್ರ ಸರ್ಕಾರದ ನೋಟಿಫಿಕೇಶನ್ಲ್ಲಿ ಈ ವರ್ಷದ ಪಿಜಿ ಕೋರ್ಸ್ಗಳಲ್ಲಿ 39 ಜನರಲ್ ಸರ್ಜರಿ ಮತ್ತು 19 ಸ್ಪೆಷಲ್ ಸರ್ಜರಿ ತರಬೇತಿಗೆ ಅವಕಾಶ ಮಾಡಿಕೊಟ್ಟಿದೆ. ಸೆಂಟ್ರಲ್ ಕೌನ್ಸಿಲ್ ಆಫ್ ಇಂಡಿಯನ್ ಮೆಡಿಸಿನ್ನ ಇತ್ತೀಚಿನ ನಡೆಯಿಂದಾಗಿ ಇಡೀ ದೇಶದ ಆಧುನಿಕ ವೈದ್ಯಕೀಯ ವೃತ್ತಿಯು ಕಷ್ಟಕ್ಕೆ ಸಿಲುಕಿದೆ ಅನ್ನೋದು ವೈದ್ಯರ ಅಭಿಪ್ರಾಯವಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ರೋಗಿಗಳಿಗೂ ಸಮಸ್ಯೆ ಆಗಲಿದೆ ಅನ್ನೋದು ವೈದ್ಯರ ಆತಂಕ.
ನಾಳೆ ನಡೆಯಲಿರುವ ಬಂದ್ನಿಂದ ಹೊರರೋಗಿಗಳಿಗೆ ಸಮಸ್ಯೆ ಆಗಲಿದೆ. ತುರ್ತು ಸೇವೆ ಮತ್ತು ಕೋವಿಡ್ ಸೇವೆ ಎಂದಿನಂತೆ ಇರಲಿದೆ. ಆದರೆ ಕೆಮ್ಮು, ನೆಗಡಿ, ಜ್ವರ, ರೆಗ್ಯೂಲರ್ ಚೆಕ್ಪ್ ಹೋಗುವವರಿಗೆ ಓಪಿಡಿ ಸೇವೆ ಅಲಭ್ಯವಾಗಲಿದೆ. ಐಎಂಎ ನೀಡಿರುವ ಬಂದ್ ಕರೆಗೆ ಫನಾ ಸೇರಿದಂತೆ ಹಲವು ಸಂಘಟನೆಗಳು ಸಾಥ್ ನೀಡಿದ್ದಾರೆ.
ಸರ್ಕಾರಿ ವೈದ್ಯರ ರಜೆ ರದ್ದು: ಖಾಸಗಿ ವೈದ್ಯರ ಮುಷ್ಕರಕ್ಕೆ ಎಚ್ಚೆತ್ತ ಸರ್ಕಾರ, ಸರ್ಕಾರಿ ಆಸ್ಪತ್ರೆಯ ಎಲ್ಲಾ ವೈದ್ಯಕೀಯ ಸಿಬ್ಬಂದಿಗೆ ನಾಳೆ ರಜೆ ರದ್ದು ಮಾಡಿದೆ. ಕಡ್ಡಾಯವಾಗಿ ಸೇವೆಗೆ ಬರುವಂತೆ ಸೂಚಿಸಿದ್ದು, ಸಾರ್ವಜನಿಕರಿಗೆ ತೊಂದರೆ ಆಗದಂತೆ ಕ್ರಮವಹಿಸಿದೆ.