ಕಾರವಾರ: ಮಾರಕಾಸ್ತ್ರಗಳನ್ನು ಬಳಸಿಕೊಂಡು ದರೋಡೆ ನಡೆಸಲು ಹೊರಟಿದ್ದ ಯುವಕರ ಗ್ಯಾಂಗ್ ಒಂದನ್ನು ಶಿರಸಿ ಪೊಲೀಸರು ಸಿನಿಮೀಯ ರೀತಿಯಲ್ಲಿ ಬಂಧಿಸಿರುವ ಘಟನೆ ಶಿರಸಿಯ ಯಲ್ಲಾಪುರ ರಸ್ತೆಯ ಬಳಿ ನಡೆದಿದೆ.
ಶಿರಸಿಯ ವಿದ್ಯಾ ನಗರದ ಮುರುಗೇಶ ಪೂಜಾರಿ (20), ಮಹಮ್ಮದ್ ಯಾಸೀನ್ (23), ಮೊಹಲ್ಲಾದ ಅಜ್ಮಿತ್ ಅಸ್ಲಾಂ (19), ಗುಲಾಮ್ ಮುಸ್ತಫಾ (19), ಮರ್ದಾನ್ ಶಫಿಸಾಬ (19) ಹಾಗೂ ಚರಣ್ ನಾಯ್ಕ (19) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ದರೋಡೆಗೆ ಬಳಸುವ ವಸ್ತುಗಳು ಹಾಗೂ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಕೃತ್ಯದ ಮುಖ್ಯ ಆರೋಪಿಯಾಗಿದ್ದ ವಿದ್ಯಾ ನಗರದ ಮಂಜುನಾಥ ಅಲಿಯಾಸ್ ಮಿಂಟಾ ಮಾರುತಿ ಪೂಜಾರಿ ಪರಾರಿಯಾಗಿದ್ದಾನೆ. ಬಂಧಿತರಿಂದ ಮಾರಕಾಸ್ತ್ರಗಳು, ಬೈಕ್, ಮತ್ತು ಅಂದಾಜು 20 ಸಾವಿರ ಮೌಲ್ಯದ 912 ಗ್ರಾಂ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಡಿಎಸ್ಪಿ ಜಿ.ಟಿ.ನಾಯಕ, ಸಿಪಿಐ ಪ್ರದೀಪ್ ಮಾರ್ಗದರ್ಶನದಲ್ಲಿ ಶಿರಸಿ ಮಾರುಕಟ್ಟೆ ಠಾಣೆಯ ಪಿಎಸ್ಐ ನಾಗಪ್ಪ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಈ ಕುರಿತು ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.