ಮಂಗಳೂರು: ಕೊರೊನಾ ಪ್ರಕರಣಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ 17 ಗ್ರಾಮ ಪಂಚಾಯತ್ನ್ನು ಒಂದು ವಾರಗಳ ಕಾಲ ಸಂಪೂರ್ಣ ಸೀಲ್ಡೌನ್ ಮಾಡಿ ದ.ಕ ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯ ಮಂಗಳೂರು, ಬೆಳ್ತಂಗಡಿ, ಸುಳ್ಯ ಮತ್ತು ಕಡಬ ತಾಲೂಕಿನ 17 ಗ್ರಾಮ ಪಂಚಾಯತ್ಗಳಲ್ಲಿ 50ಕ್ಕಿಂತ ಹೆಚ್ಚು ಕೋವಿಡ್ ಸಕ್ರಿಯ ಪ್ರಕರಣಗಳಿರುವ ಹಿನ್ನೆಲೆಯಲ್ಲಿ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಮಂಗಳೂರು ತಾಲೂಕಿನ ನೀರುಮಾರ್ಗ ಹಾಗೂ ಕೊಣಾಜೆ, ಬೆಳ್ತಂಗಡಿ ತಾಲೂಕಿನ ನಾರಾವಿ, ಕೊಯ್ಯುರು, ಮಿತ್ತಬಾಗಿಲು, ಮಾಲಾಡಿ, ನೆರಿಯಾ, ಲಾಯಿಲಾ, ಚಾರ್ಮಾಡಿ, ಸುಳ್ಯ ತಾಲೂಕಿನ ಐವರ್ನಾಡು, ಅಮರಮುಡ್ನೂರು, ಕೊಲ್ಲಮೊಗರು, ಗುತ್ತಿಗಾರು, ಅರಂತೋಡು. ಕಡಬ ತಾಲೂಕಿನ ಸುಬ್ರಹ್ಮಣ್ಯ, ಸವಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯನ್ನು ಸೀಲ್ಡೌನ್ ಮಾಡಲಾಗಿದೆ. ಇದನ್ನೂ ಓದಿ: 8ನೇ ಪರಿಚ್ಛೇದಕ್ಕೆ ತುಳು – ಸರ್ಕಾರದ ಜೊತೆ ಮಾತುಕತೆ ನಡೆಯುತ್ತಿದೆ ಎಂದ ಕಟೀಲ್
ಜೂ.14ರ ಬೆಳಗ್ಗೆ 9 ಗಂಟೆಯಿಂದ ಜೂ. 21 ರ ಬೆಳಗ್ಗೆ 9 ಗಂಟೆವರೆಗೆ ಸೀಲ್ಡೌನ್ ಮಾಡಿ ಆದೇಶ ಮಾಡಲಾಗಿದ್ದು, ತುರ್ತು ವೈದ್ಯಕೀಯ ಸೇವೆ ಹೊರತುಪಡಿಸಿ ಗ್ರಾಮಕ್ಕೆ ಒಳ ಪ್ರವೇಶ ಮತ್ತು ನಿರ್ಗಮನ ಸಂಪೂರ್ಣ ಬಂದ್ ಆಗಲಿದೆ. ಈ ಗ್ರಾಮ ಪಂಚಾಯತ್ನ ಜನರಿಗೆ ಅಗತ್ಯ ವಸ್ತು ಪೂರೈಸಲು ಪಾವತಿ ಆಧಾರದ ಮೇಲೆ ಕಾರ್ಯಪಡೆ ರಚಿಸಲು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.