ದಾವಣಗೆರೆ: ಮಲೆನಾಡು ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿದೆ. ಇದರಿಂದ ತುಂಗಭದ್ರಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಇದೇ ಸಂದರ್ಭದಲ್ಲಿ ತುಂಗಭದ್ರಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾದ ಬೆನ್ನಲ್ಲೇ ಗ್ರಾಮಕ್ಕೆ ಮೊಸಳೆ ಮರಿ ಎಂಟ್ರಿ ಕೊಟ್ಟಿದೆ. ರೈತನ ಮನೆಗೆ ಮೊಸಳೆ ಮರಿ ಬಂದು ಬೆಳೆಗ್ಗೆಯೇ ಎಲ್ಲರನ್ನೂ ಆತಂಕಕ್ಕೆ ದೂಡಿತ್ತು.
ಜಿಲ್ಲೆಯ ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಸಾಸ್ವೆಹಳ್ಳಿ ಗ್ರಾಮದ ತುಂಗಭದ್ರಾ ನದಿ ತಟದಲ್ಲಿ ರೈತನ ಮನೆಯಿದ್ದು, ನದಿಯ ನೀರು ಹೆಚ್ಚಾದ ಹಿನ್ನೆಲೆ ಮೊಸಳೆ ಮರಿ ರೈತನ ಮನೆ ಹತ್ತಿರ ಆಗಮಿಸಿದೆ.
ಬಳಿಕ ಗ್ರಾಮಸ್ಥರು ಈ ಮೊಸಳೆ ಮರಿ ರಕ್ಷಿಸಿ ಮಾವಿನಕಟ್ಟೆ ಅರಣ್ಯ ಇಲಾಖೆಯ ಸಿಬ್ಬಂದಿ ಸಿದ್ದೇಶ್ ಅವರಿಗೆ ಒಪ್ಪಿಸಿದರು. ಪುಟ್ಟ ಮರಿ ಆಗಿದ್ದರಿಂದ ಸುಲಭವಾಗಿ ಕೈಯಲ್ಲಿ ಹಿಡಿದ ಗ್ರಾಮಸ್ಥರು, ಪಾತ್ರೆಯೊಂದರಲ್ಲಿ ಸುರಕ್ಷಿತವಾಗಿಟ್ಟು, ಅರಣ್ಯ ಇಲಾಖೆಯ ಸಿಬ್ಬಂದಿ ಬಂದ ಬಳಿಕ ಅವರಿಗೆ ಒಪ್ಪಿಸಿದರು. ಈ ಪುಟ್ಟ ಮೊಸಳೆಯನ್ನು ವೀಕ್ಷಿಸಲು ಇಡೀ ಗ್ರಾಮದ ಜನ ಸಾಗರವೇ ಹರಿದು ಬಂದಿತ್ತು.