– ಸಾಧುಗಳನ್ನ ರೂಮಿನಲ್ಲಿ ಲಾಕ್ ಮಾಡಿ ಸಾಮೂಹಿಕ ಅತ್ಯಾಚಾರ
– ತಡೆಯಲು ಬಂದ ಸಾಧುಗೆ ಥಳಿತ
ರಾಂಚಿ: ಸಾಧ್ವಿ ಮೇಲೆ ನಾಲ್ವರು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಜಾರ್ಖಂಡ್ನ ಗೊಡ್ಡಾ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಆಶ್ರಮವೊಂದರಲ್ಲಿ ಸೋಮವಾರ ರಾತ್ರಿ ಈ ಘಟನೆ ನಡೆದಿದ್ದು, ಪೊಲೀಸರು ಮಂಗಳವಾರ ನಾಲ್ವರು ಆರೋಪಿಗಳಲ್ಲಿ ಮೂವರನ್ನು ಬಂಧಿಸಿದ್ದಾರೆ.
ಜಿಲ್ಲೆಯ ಆಶ್ರಮಕ್ಕೆ ಸೋಮವಾರ ತಡರಾತ್ರಿ ನಾಲ್ವರು ಆರೋಪಿಗಳು ಏಕಾಏಕಿ ಬಲವಂತವಾಗಿ ನುಗ್ಗಿದ್ದಾರೆ. ನಂತರ ಆಶ್ರಮದಲ್ಲಿದ್ದ ಸಾಧುಗಳನ್ನು ಒಂದು ರೂಮಿನಲ್ಲಿ ಕೂಡಿ ಹಾಕಿ ಬೀಗ ಹಾಕಿದ್ದಾರೆ. ಈ ವೇಳೆ ಆಶ್ರಮದಲ್ಲಿದ್ದ 38 ವರ್ಷದ ಸಾಧ್ವಿ ಮೇಲೆ ನಾಲ್ವರು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ವೇಳೆ ಸಾಧ್ವಿ ಮೇಲಿನ ಅತ್ಯಾಚಾರವನ್ನು ಸಾಧುವೊಬ್ಬರು ತಡೆಯಲು ಬಂದಾಗ ಅವರನ್ನು ಆರೋಪಿಗಳು ಥಳಿಸಿದ್ದಾರೆ. ಸಂತ್ರಸ್ತೆ ಮಂಗಳವಾರ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಸಂತ್ರಸ್ತೆ ನೀಡಿದ ದೂರಿನ ಅನ್ವಯ ಪೊಲೀಸರು ಎಫ್ಐಆರ್ ದಾಖಲಿಸಿದ್ದು, ಘಟನೆ ನಡೆದ ಸ್ಥಳಕ್ಕೆ ಹೋಗಿ ತನಿಖೆ ನಡೆಸಿದ್ದಾರೆ.
ಸದ್ಯಕ್ಕೆ ನಾಲ್ವರು ಆರೋಪಿಗಳಲ್ಲಿ ಮೂವರನ್ನು ಬಂಧಿಸಿದ್ದು, ನಾಲ್ಕನೇ ಆರೋಪಿ ಪರಾರಿಯಾಗಿದ್ದಾನೆ. ಇದೀಗ ಆತನಿಗೆ ಪೊಲೀಸರು ಶೋಧಕಾರ್ಯ ಆರಂಭಿಸಿದ್ದಾರೆ.