– ಪಬ್ಲಿಕ್ ಟಿವಿಗೆ ಶಿವಮೊಗ್ಗ ಡಿಸಿ ಹೇಳಿಕೆ
– ವಿದೇಶದಲ್ಲಿ ಬಳಸುವ ಸ್ಫೋಟಕವನ್ನು ತಂದವರು ಯಾರು?
ಶಿವಮೊಗ್ಗ: ಹುಣಸೋಡಿನಲ್ಲಿ ಜಿಲೆಟಿನ್ ಮತ್ತು ಡೈನಾಮೈಟ್ ಸ್ಫೋಟಗೊಂಡಿಲ್ಲ. ಬದಲಾಗಿ ಜೆಲ್ ರೂಪದ ವಸ್ತು ಸ್ಫೋಟಗೊಂಡ ವಿಚಾರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಪಬ್ಲಿಕ್ ಟಿವಿಗೆ ಜಿಲ್ಲಾಧಿಕಾರಿ ಡಿಸಿ ಶಿವಕುಮಾರ್ ಪ್ರತಿಕ್ರಿಯಿಸಿ, ಬೆಂಗಳೂರು ಮತ್ತು ಮಂಗಳೂರಿನಿಂದ ಆಗಮಿಸಿದ ಬಾಂಬ್ ನಿಷ್ಕ್ರಿಯ ದಳದ ಸದಸ್ಯರು ಬಂದು ತನಿಖೆ ನಡೆಸುತ್ತಿದ್ದಾರೆ. ತನಿಖೆಯ ವೇಳೆ ಜೆಲ್ ರೂಪದ ವಸ್ತು ಸ್ಫೋಟಗೊಂಡ ವಿಚಾರ ತಿಳಿದು ಬಂದಿದೆ. ಇದು ಪ್ರಾಥಮಿಕ ತನಿಖೆಯಲ್ಲಿ ಲಭ್ಯವಾದ ಮಾಹಿತಿ ಎಂದು ತಿಳಿಸಿದರು.
ಜೆಲ್ ರೀತಿಯ ಸ್ಫೋಟಕವನ್ನು ವಿದೇಶದಲ್ಲಿ ಬಳಕೆ ಮಾಡಲಾಗುತ್ತದೆ. ಆದರೆ ಈ ಕ್ವಾರಿಗೆ ಸ್ಫೋಟಕ ಬಂದಿದ್ದು ಹೇಗೆ? ಎಲ್ಲಿಂದ ತಂದಿದ್ದಾರೆ? ಇಷ್ಟು ದೊಡ್ಡ ಪ್ರಮಾಣದಲ್ಲಿ ತಂದವರು ಯಾರು? ಎಂಬುದರ ಬಗ್ಗೆ ತನಿಖೆ ನಡೆದಾಗ ಸ್ಪಷ್ಟವಾದ ವಿಚಾರ ಲಭ್ಯವಾಗಲಿದೆ ಎಂದು ತಿಳಿಸಿದರು.
ಸದ್ಯ ಸ್ಫೋಟದ ಸ್ಥಳದಲ್ಲಿ ಐವರ ಮೃತದೇಹ ಪತ್ತೆಯಾಗಿದೆ. ಮುಖ್ಯಮಂತ್ರಿಗಳಿಗೆ ಎಲ್ಲ ಮಾಹಿತಿಗಳನ್ನು ನೀಡುತ್ತಿದ್ದೇವೆ. ಅಕ್ರಮ ಕಲ್ಲು ಕ್ವಾರಿಗಳ ಬಗ್ಗೆ ಮಾಹಿತಿಗಳನ್ನು ಸಂಗ್ರಹ ಮಾಡಲಾಗುತ್ತಿದೆ ಎಂದು ಹೇಳಿದರು.
ಗುರುವಾರ ರಾತ್ರಿ 2 ಶವಗಳು ಪತ್ತೆಯಾಗಿತ್ತು. ಇಂದು ಮೂರು ಶವ ಪತ್ತೆಯಾಗಿದೆ. ದುರಂತದಲ್ಲಿ ಒಟ್ಟು ಎಷ್ಟು ಮಂದಿ ಸಾವನ್ನಪ್ಪಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟವಾದ ಮಾಹಿತಿ ಲಭ್ಯವಾಗಿಲ್ಲ.