ಕಾರವಾರ: ರಮೇಶ್ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನಿರ್ಧಾರ ಬದಲಾಯಿಸಬೇಕು. ನಾವೆಲ್ಲ ಜಾರಕಿಹೊಳಿ ಅವರ ಸ್ನೇಹಿತರು. ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ವಿಚಾರ ಕೈ ಬಿಡುವಂತೆ ಅವರಲ್ಲಿ ನಾನು ಮನವಿ ಮಾಡುತ್ತೇನೆ ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಹೇಳಿದ್ದಾರೆ.
ಇಂದು ಯಲ್ಲಾಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಜಾರಕಿಹೊಳಿ ಅವರಿಗೆ ಪುನಃ ಸಚಿವ ಸ್ಥಾನ ಕೊಡಬೇಕೋ? ಬಿಡಬೇಕೋ? ಎನ್ನುವುದು ಮುಖ್ಯಮಂತ್ರಿಗಳ ನಿರ್ಧಾರ. ಈ ಬಗ್ಗೆ ಪಕ್ಷದ ಹೈ ಕಮಾಂಡ್ ನಿರ್ಧಾರ ತೆಗದುಕೊಳ್ಳುತ್ತದೆ. ಅವರು ರಾಜೀನಾಮೆ ವಿಚಾರವಾಗಿ ಉದ್ವೇಗವಾಗಿ ಮಾತನಾಡಿದ್ದಾರೆ.
ಇನ್ನು ನಟ ಚೇತನ್ ರಿಂದ ಹೆಬ್ಬಾರ್ ವಿರುದ್ಧ ಮಾನ ನಷ್ಟ ಮೊಕದಮ್ಮೆ ದಾಖಲಿಸಿರುವ ಕುರಿತು ಮಾತನಾಡಿದ ಅವರು, ನಟ ಚೇತನ್ ನನ್ನ ವಿರುದ್ಧ 1 ರೂ. ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ. ನನ್ನ ಜಾತಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಜಾತಿ ಬಗ್ಗೆ ಸಂಘರ್ಷ ಹುಟ್ಟುಹಾಕಬಾರದು. ಸಮಾಜದ ಮುಖಂಡನಾಗಿ ಉತ್ತರ ಕೊಟ್ಟಿದ್ದೇನೆ ಅದಕ್ಕೆ ಬದ್ಧನಾಗಿದ್ದೇನೆ ಎಂದರು. ಇದನ್ನೂ ಓದಿ: ಪ್ರಸಂಗ ಬಂದರೆ ಜಾರಕಿಹೊಳಿ ಮಂತ್ರಿ ಆಗ್ತಾರೆ: ಉಮೇಶ್ ಕತ್ತಿ ಸ್ಫೋಟಕ ಹೇಳಿಕೆ
ಚಿತ್ರದುರ್ಗದಲ್ಲಿ ಮಾತನಾಡಿದ ಸಚಿವ ಜೆ.ಸಿ.ಮಾಧುಸ್ವಾಮಿ, ಸಿಡಿ ಪ್ರಕರಣದಿಂದ ರಮೇಶ್ ಜಾರಕಿಹೊಳಿ ಮುಕ್ತರಾದರೆ ಮತ್ತೆ ಮಂತ್ರಿ ಆಗುತ್ತಾರೆ, ಇದರಲ್ಲಿ ಗೊಂದಲ ಇಲ್ಲ. ಕೇಸ್ ನಿಂದ ಮುಕ್ತರಾದರೆ ಮುಗಿಯಿತು. ರಮೇಶ್ ಜಾರಕಿಹೊಳಿ ಸಿಡಿ ಕೇಸ್ ತನಿಖೆಯಲ್ಲಿದ್ದು, ಅವರನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಮಹಾರಾಷ್ಟ್ರ ಮಾಜಿ ಸಿಎಂ ಫಡ್ನವೀಸ್ ಭೇಟಿ ಮಾಡುವುದರಿಂದ ತಪ್ಪೇನು ಇಲ್ಲ. ಬೆಳಗಾವಿ ಹಾಗೂ ಮುಂಬೈ ನಿಕಟವಾಗಿರುವ ಜಾಗಗಳು, ಹಾಗಾಗಿ ಭೇಟಿ ಮಾಡಿರುತ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ಯಾವನ ಚಡ್ಡಿ ಕಿತ್ತು ಕೈಯಲ್ಲಿ ಬರುತ್ತೆ, ಆಗ ಇನ್ನೊಬ್ಬ ಬೆತ್ತಲಾಗುತ್ತಾನೆ: ಗೋವಿಂದ್ ಕಾರಜೋಳ