ಬೆಂಗಳೂರು: ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡು ದುಃಖದಲ್ಲಿದ್ದ ಕುಟುಂಬಕ್ಕೆ ಪುಟ್ಟ ಮಗುವಿನ ಆಗಮನದಿಂದ ಕೊಂಚ ರಿಲೀಫ್ ಸಿಕ್ಕಿದೆ. ಆದರೂ ಇದೀಗ ಮಾವ ಅರ್ಜುನ್ ಸರ್ಜಾ ಮಾತ್ರ ತಮ್ಮ ಅಳಿಯ ಚಿರುವನ್ನು ನೆನಪು ಮಾಡಿಕೊಂಡು ಭಾವುಕರಾಗಿದ್ದಾರೆ.
ಹೌದು. ಇನ್ ಸ್ಟಾಗ್ರಾಂನಲ್ಲಿ ಅಳಿಯನ ಜೊತೆಗಿನ ಫೋಟೋವೊಂದನ್ನು ಅಪ್ಲೋಡ್ ಮಾಡಿರುವ ಅರ್ಜುನ್ ಸರ್ಜಾ, ಭಾವುಕರಾಗಿ ಬರೆದುಕೊಂಡಿದ್ದಾರೆ. ಈ ಸಮಯದಲ್ಲಿ ನಿನ್ನನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತೇನೆ ಎಂಬುದನ್ನು ಹೇಳಿಕೊಳ್ಳಲು ಕೂಡ ಸಾಧ್ಯವಾಗುತ್ತಿಲ್ಲ ಚಿರು ಮಗನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಚಿರುವನ್ನು ಕಳೆದುಕೊಂಡು ಬರೋಬ್ಬರಿ 6 ತಿಂಗಳೇ ಕಳೆದು ಹೋಗಿದೆ. ಆದರೂ ಅವರ ಕುಟುಂಬ, ಅಭಿಮಾನಿ ಬಳಗ ಇನ್ನೂ ಅವರ ನೆನಪಿನಲ್ಲೇ ಇದೆ. ಈ ಮಧ್ಯೆ ಮೇಘನಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದು, ಚಿರುನೇ ಮಗುವಾಗಿ ಮತ್ತೆ ಹುಟ್ಟಿ ಬಂದಿದ್ದಾರೆ ಎಂದು ಕುಟುಂಬ ಕೊಂಚ ನೆಮ್ಮದಿಯಾಗಿದೆ.
ನವೆಂಬರ್ 26ರಂದು ನಟ ಧ್ರುವ ಸರ್ಜಾ ಹಾಗೂ ಪತ್ನಿ ಪ್ರೇರಣಾ ದಂಪತಿ ತಮ್ಮ ವೈವಾಹಿಕ ಜೀವನಕ್ಕೆ ಕಾಲಿಟ್ಟು ಒಂದು ವರ್ಷದ ಸಂಭ್ರಮದಲ್ಲಿದ್ದರು. ಹೀಗಾಗಿ ನವೆಂಬರ್ 28ರಂದು ಕನಕಪುರ ರಸ್ತೆಯ ನೆಲಗೋಳಿ ಗ್ರಾಮದಲ್ಲಿ ಧ್ರುವ ಸರ್ಜಾ ಫಾರ್ಮ್ ಹೌಸ್ ನಲ್ಲಿ ಚಿರಂಜೀವಿ ಸರ್ಜಾ ಸಮಾಧಿ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರೇವೇರಿಸಿದ್ದರು. ಈ ವೇಳೆ ಕಟುಂಬಸ್ಥರು ಭಾಗಿಯಾಗಿದ್ದರು. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳು ವೈರಲ್ ಆಗಿದ್ದು, ಧ್ರುವ ಸರ್ಜಾಗೆ ಅಣ್ಣನ ಮೇಲಿರುವ ಪ್ರೀತಿ ಬಗ್ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದರು.