ಹಾವೇರಿ: ರಾಜ್ಯದಲ್ಲಿ ಗೊಬ್ಬರದ ಕೃತಕ ಅಭಾವ ಸೃಷ್ಟಿಸಿದರೆ ಅಂತವರ ಮೇಲೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು. ಕಳೆದ ವರ್ಷ ರಾಜ್ಯದ ಹಲವೆಡೆ ಕಳಪೆ ಬಿತ್ತನೆ ಬೀಜ ಮತ್ತು ಗೊಬ್ಬರ ಮಾರುತ್ತಿದ್ದವರ ಮೇಲೆ ಕ್ರಮ ಕೈಗೊಂಡಿದ್ದೇವೆ. ಈ ಬಾರಿ ಈ ರೀತಿ ಕಂಡು ಬಂದಲ್ಲಿ ಅಂತವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.
ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿ.ಸಿ ಪಾಟೀಲ್, ಕಳಪೆ ಬಿತ್ತನೆ ಬೀಜ ಮತ್ತು ಗೊಬ್ಬರದ ಮಾರಾಟಕ್ಕೆ ಅವಕಾಶ ನೀಡದಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈಗಾಗಲೇ ರಾಜ್ಯದ ಬೀದರ್, ಕೊಪ್ಪಳ, ರಾಣೆಬೆನ್ನೂರು ಸೇರಿದಂತೆ ಹಲವೆಡೆ ದಾಳಿ ಮಾಡಿ ಕಳಪೆ ಬೀಜ ಮತ್ತು ಗೊಬ್ಬರ ವಶಪಡಿಸಿಕೊಳ್ಳಲಾಗಿದೆ. ಕಳ್ಳರನ್ನು ನಾವು ಹಿಡಿತಾನೆ ಇರುತ್ತೇವೆ, ಆದರೂ ಕಳ್ಳರು ಇರುತ್ತಾರೆ. ಕಳ್ಳತನವನ್ನು ಕಂಟ್ರೋಲ್ ಮಾಡುವ ಕೆಲಸ ಮಾಡುತ್ತೇವೆ ಎಂದರು. ಇದನ್ನೂ ಓದಿ:ಬರುತ್ತಿದೆ ರಹಸ್ಯ ಬಿತ್ತನೆ ಬೀಜಗಳು – ರೈತರೇ ಚೀನಾದ ಕುತಂತ್ರಕ್ಕೆ ಬಲಿಯಾಗಬೇಡಿ
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕಳಪೆ ಬೀಜದ ಮಾರಾಟ ಅಷ್ಟಾಗಿ ನಡಿತಿಲ್ಲ. ರೈತ ಸಂಪರ್ಕ ಕೇಂದ್ರ ಮತ್ತು ಅಧಿಕೃತ ಅಂಗಡಿಗಳಲ್ಲಿ ರೈತರು ಬಿತ್ತನೆ ಬೀಜ ಖರೀದಿ ಮಾಡಬೇಕು. ಐವತ್ತು, ನೂರು ರೂಪಾಯಿ ಉಳಿಯುತ್ತದೆ ಎಂದು ರೈತರು ಎಲ್ಲೆಲ್ಲೋ ಬಿತ್ತನೆ ಬೀಜ ತಗೆದುಕೊಂಡರೆ ಅದಕ್ಕೆ ಸರ್ಕಾರ ಜವಾಬ್ದಾರಿ ಆಗುವುದಿಲ್ಲ. ಚೀನಾದಿಂದ ಯಾವುದೇ ರೀತಿಯ ಬಿತ್ತನೆ ಬೀಜದ ಪ್ಯಾಕೇಟ್ಗಳು ರೈತರ ಮನೆಗೆ ಬಂದರೆ ಅವುಗಳನ್ನು ಬಿತ್ತನೆ ಮಾಡಬಾರದು. ಕಳೆದ ವರ್ಷ ಈ ರೀತಿ ಕಂಡು ಬಂದಿತ್ತು. ಈ ವರ್ಷ ಚೀನಾ ಬೀಜಗಳು ಬಂದ ಉದಾಹರಣೆಗಳು ನಡೆದಿಲ್ಲ ಎಂದು ತಿಳಿಸಿದರು.