– ಪೊಲೀಸರಿಂದ ಬುದ್ಧಿವಾದ
ಚಿಕ್ಕೋಡಿ/ಬೆಳಗಾವಿ: ಕ್ಯಾನ್ಸರ್ ಇರುವ ತಾಯಿಯನ್ನು ನಡು ರಸ್ತೆಯಲ್ಲಿ ಬಿಟ್ಟು ಹೊರಟಿದ್ದ ಪಾಪಿ ಮಗನಿಗೆ ಪೊಲೀಸರು ಬುದ್ಧಿವಾದ ಹೇಳಿರುವ ಹೃದಯವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದಿದೆ.
ಅಥಣಿ ಪಟ್ಟಣದ ಶ್ರೀಧರ್ ರಮೇಶ್ ಸೋಳಸಿ ತನ್ನ ತಾಯಿಯನ್ನು ನಡು ರಸ್ತೆಯಲ್ಲಿ ಬಿಟ್ಟು ಹೊರಡಲು ಯತ್ನಿಸಿದ್ದ. ಮಹಾರಾಷ್ಟ್ರದ ಪುಣೆಯಲ್ಲಿ ವ್ಯಾಸಾಂಗಕ್ಕೆಂದು ವಾಸವಾಗಿರುವ ಮಗ ಶ್ರೀಧರ್, ದಿಂಬು ಹಾಸಿಗೆ, ಬಟ್ಟೆಯ ಜೊತೆ ತನ್ನ ಹೆತ್ತ ತಾಯಿಯನ್ನು ನಡು ರಸ್ತೆಯಲ್ಲೇ ಬಿಟ್ಟು ಹೋಗುತ್ತಿದ್ದ. ಈ ದೃಶ್ಯವನ್ನು ಕಂಡರೆ ಎಂತಹವರಿಗೂ ಮರುಕ ಹುಟ್ಟುತ್ತದೆ.
ಘಟನೆ ಕಂಡ ಸ್ಥಳೀಯರು ಅನುಮಾನಗೊಂಡು ವಿಚಾರಿಸಿದ್ದು, ಈ ವೇಳೆ ಸತ್ಯ ಹೊರ ಬಿದ್ದಿದೆ. ಆರಂಭದಲ್ಲಿ ತಾಯಿಯನ್ನು ಬಿಟ್ಟು ಮಾತ್ರೆ ತರಲು ಹೋಗಿದ್ದೆ ಎಂದು ಮಗ ಶ್ರೀಧರ್ ಸಬೂಬು ನೀಡಿದ್ದಾನೆ. ನಂತರ ಪುತ್ರನಿಗೆ ಗೂಸಾ ನೀಡಿ, ಪೊಲೀಸ್ ಠಾಣೆಗೆ ಕರೆದೊಯ್ದು ಪೊಲೀಸರ ಸಮ್ಮುಖದಲ್ಲಿ ಪ್ರಕರಣ ಇತ್ಯರ್ಥವಾಗಿದೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.