ಕೋಲಾರ: ಕೇರಳ ಸೇರಿದಂತೆ ಹೊರ ರಾಜ್ಯಗಳಿಗೆ ಕೋಲಾರ ಜಿಲ್ಲೆಯ ಕೆಂಪು ಹಾಗೂ ಜೇಡಿ ಮಣ್ಣನ್ನ ಅಕ್ರಮವಾಗಿ ಸಾಗಾಟ ಮಾಡುವ ಜಾಲ ಎಗ್ಗಿಲ್ಲದೆ ನಡೆಯುತ್ತಿದೆ.
ಮಾಲೂರು ತಾಲೂಕಿನಾದ್ಯಂತ ಎಗ್ಗಿಲ್ಲದೆ ಅಕ್ರಮವಾಗಿ ಮಣ್ಣು ಸಾಗಾಟ ನಡೆಯುತ್ತಿಯುತ್ತಿದ್ದು, ಅಧಿಕಾರಿಗಳು ಜಾಣ ಕುರುಡು ಪ್ರದರ್ಶನ ಮಾಡುತ್ತಿದ್ದಾರಾ ಎಂಬ ಅನುಮಾನ ಮೂಡಿದೆ. ಜಿಲ್ಲೆಯ ಮಾಲೂರು ತಾಲೂಕಿನ ಮೈಲಾಂಡಹಳ್ಳಿ ಕೆರೆಯಲ್ಲಿ ಬೆಳಗ್ಗೆಯಿಂದಲೇ ಟಿಪ್ಪರ್ ಲಾರಿಗಳಲ್ಲಿ ಅಕ್ರಮವಾಗಿ ಮಣ್ಣು ಸಾಗಾಟ ಮಾಡಲಾಗುತ್ತಿದೆ.
ಮಣ್ಣು ಮಾಫಿಯಾದಲ್ಲಿ ತೊಡಗಿರುವ ಕೆಲವರು, ಕೆಲ ಅಧಿಕಾರಿಗಳ ಕುಮ್ಮಕ್ಕಿನಿಂದ ರಾತ್ರೋ ರಾತ್ರಿ ಮಣ್ಣು ಸಾಗಾಟ ಮಾಡುತ್ತಿದ್ದಾರೆ. ಸರ್ಕಾರದಿಂದ ಯಾವುದೇ ಅನುಮತಿ ಪಡೆಯದೆ ಅಕ್ರಮವಾಗಿ ಟಿಪ್ಪರ್ ಲಾರಿಗಳ ಮೂಲಕ ಮಣ್ಣು ಸಾಗಿಸುತ್ತಿದ್ದಾರೆ. ದಂಧೆಕೋರರು ಹಗಲಲ್ಲಿ ಮಣ್ಣು ತುಂಬಿ ನೆರೆ ರಾಜ್ಯಗಳಾದ ಕೇರಳ, ತಮಿಳುನಾಡು ಹಾಗೂ ಆಂದ್ರಪ್ರದೇಶಗಳಿಗೆ ಕಳುಹಿಸಿಕೊಡುತ್ತಾರೆ.
ಇದು ತಾಲೂಕಿನ ಅಧಿಕಾರಿಗಳಿಗೆ ಗೊತ್ತಿದೆ. ಆದರೂ ಜಾಣಕುರುಡತನ ಪ್ರದರ್ಶಿಸಿ ಅಕ್ರಮ ಮಣ್ಣು ಮಾಫಿಯಾ ಮಾಡುವವರಿಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.