ಉಡುಪಿ: ಶಂಕರಾಚಾರ್ಯರು ಸ್ಥಾಪಿಸಿದ ಶಕ್ತಿಪೀಠಗಳಲ್ಲಿ ಒಂದಾದ ಕೊಲ್ಲೂರು ಮೂಕಾಂಬಿಕಾ ಸನ್ನಿಧಾನದಲ್ಲಿ ಪವಾಡ ನಡೆದಿದೆ. ಚಂಡಕಾಹೋಮಕ್ಕೆ ಅರ್ಪಿಸಿದ್ದ ಹಣ್ಣಿನ ರಾಶಿಯಿಂದ ಸೇಬೊಂದು ಜಾರಿ ತಟ್ಟೆಗೆ ಬಿದ್ದಿದೆ.
ಕೆಲವು ನಿರ್ಬಂಧಗಳ ನಡುವೆ ನಾಡಿನಾದ್ಯಂತ ನವರಾತ್ರಿ ಉತ್ಸವ ನಡೆಯುತ್ತಿದೆ. ದುರ್ಗೆಯರ ಆರಾಧನೆ ಭಕ್ತಿಭಾವದಿಂದ ನಡೆಯುತ್ತಿದೆ. ಈ ನಡುವೆ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದಲ್ಲಿ ನವರಾತ್ರಿ ವಿಶೇಷ ಚಂಡಿಕಾಹೋಮದ ಸಂದರ್ಭ ಫಲವೊಂದು ಪ್ರಸಾದ ರೂಪದಲ್ಲಿ ತಟ್ಟೆಗೆ ಬಿದ್ದು ಎಲ್ಲರಲ್ಲೂ ರೋಮಾಂಚಕ ಸೃಷ್ಟಿಸಿದೆ.
ಉಡುಪಿ ಜಿಲ್ಲೆ ಬೈಂದೂರು ತಾಲೂಕು ಕೊಲ್ಲೂರು ಶ್ರೀ ಮೂಕಾಂಬಿಕ ದೇವಿಯ ಸನ್ನಿಧಾನದ ದೃಶ್ಯ ಇದು. ನವರಾತ್ರಿ ಧಾರ್ಮಿಕ ಕೈಂಕರ್ಯಗಳು ಕೊಲ್ಲೂರಲ್ಲಿ ಹತ್ತು ದಿನಗಳ ಹಿಂದೆಯೇ ಆರಂಭವಾಗಿದೆ. ನವಮಿಯ ಈ ಶುಭ ದಿನದಂದು ವಿಶೇಷ ಚಂಡಿಕಾ ಯಾಗದ ಸಂದರ್ಭ ಫಲಗಳನ್ನು ದೇವರಿಗೆ ಅರ್ಪಿಸಲಾಗಿತ್ತು. ಈ ಸಂದರ್ಭ ಹಣ್ಣುಗಳ ರಾಶಿಯಿಂದ ಸೇಬು ಹಣ್ಣು ಎದುರಿದ್ದ ತಟ್ಟೆಗೆ ಜಾರಿ ಬಿದ್ದಿದೆ.
ಭಕ್ತರು ಇದನ್ನು ದೇವಿಯ ಪ್ರಸಾದ ಎಂದು ಬಣ್ಣಿಸಿದ್ದಾರೆ. ದೇವಿ ಮೂಕಾಂಬಿಕೆ ಸೇವೆಯನ್ನು ಸ್ವೀಕರಿಸಿ ಸಂತುಷ್ಟಳಾಗಿದ್ದಾಳೆ ಎಂದು ಭಕ್ತರು ಜೈಕಾರ ಹಾಕಿದ್ದಾರೆ. ನಾಡಿನ ಸಂಕಷ್ಟ ದೂರವಾಗಲಿ, ಕೊರೊನಾ ಮಹಾಮಾರಿಗೆ ತಡೆ ಸಿಗಲಿ. ದೇವಿ ಸಂತುಷ್ಟಳಾದರೆ ಎಲ್ಲವೂ ಸಾಧ್ಯ ಆಗುತ್ತದೆ. ಜನತೆ ಕೊರೊನಾ ಕಾಲದಲ್ಲಿ ಸಾಕಷ್ಟು ಕಷ್ಟ ಅನುಭವಿಸಿದ್ದಾರೆ. ದೇವಿ ಕೃಪೆ ತೋರಲಿದ್ದಾಳೆ ಎಂದು ಸ್ಥಳೀಯ ಭಕ್ತ ಜಗದೀಶ್ ಕೊಲ್ಲೂರು ಹೇಳಿದ್ದಾರೆ.